8 ದಿನಗಳ ಮಗುವಿನ ಜೀವ ಉಳಿಸಲು ಪ್ರಧಾನಿ ನರೇಂದ್ರ ಮೋದಿ ಸಹಾಯ!
ನವದೆಹಲಿ: 8 ದಿನಗಳ ಮಗುವಿಗೆ ವೈದ್ಯಕೀಯ ಚಿಕಿತ್ಸೆ ತುರ್ತಾಗಿ ಸಿಗುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಾಯ ಮಾಡಿದ್ದು, ಆ ಮಗುವಿನ ಪೋಷಕರ ಪಾಲಿಗೆ ಜೀವ ರಕ್ಷಕನಾಗಿದ್ದಾರೆ.
ಅಸ್ಸಾಂ ನಲ್ಲಿ ಜನಿಸಿದ್ದ 8 ದಿನಗಳ ಮಗುವಿಗೆ ಶ್ವಾಸಕೋಶದ ಸಮಸ್ಯೆ ತೀವ್ರವಾಗಿ ಬಾಧಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಏರ್ ಆಂಬುಲೆನ್ಸ್ ಸಹಾಯದ ಮೂಲಕ ದಿಬ್ರುಘಢ್ ನಿಂದ ದೆಹಲಿಯ ಗಂಗಾರಾಮ್ಸ್ ಆಸ್ಪತ್ರೆಗೆ ಮಗುವನ್ನು ಕರೆ ತರಲಾಗುತ್ತಿತ್ತು. ತುರ್ತಾಗಿ ಚಿಕಿತ್ಸೆ ಅಗತ್ಯವಿದ್ದಿದ್ದರಿಂದ ಸೂಕ್ತ ಸಮಯದಲ್ಲಿ ನೆರವಿಗೆ ಧಾವಿಸಿದ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ತಂಡಕ್ಕೆ ಟ್ರಾಫಿಕ್ ಮುಕ್ತ ಸಂಚಾರವನ್ನು ಕಲ್ಪಿಸಲು ನೆರವಾದರು. ಸೂಕ್ತ ಸಮಯದಲ್ಲಿ ಪ್ರಧಾನಿಯ ನೆರವು ಸಿಕ್ಕಿದ್ದರಿಂದ ಮಗುವಿನ ಪ್ರಾಣ ಉಳಿದಿದ್ದು, ಪ್ರಧಾನಿಯವರ ಸಹಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಇಂದು ನಮ್ಮ ಪಾಲಿಗೆ ದೇವರಂತೆ ನೆರವಿಗೆ ಧಾವಿಸಿದರು ಎಂದು ಮಗುವಿನ ತಂದೆ ಹೇಳಿದ್ದಾರೆ. ದೆಹಲಿಯ ಗಂಗಾ ರಾಮ್ಸ್ ಆಸ್ಪತ್ರೆಗೆ ಟ್ರಾಫಿಕ್ ಮುಕ್ತ ಸಂಚಾರವನ್ನು ಕಲ್ಪಿಸಲು ಈಶಾನ್ಯ ರಾಜ್ಯದವರೇ ಆದ ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಐಪಿಎಸ್ ಅಧಿಕಾರಿಯನ್ನೂ ಸೇರಿದಂತೆ ಅನೇಕ ಪ್ರಭಾವಿ ಗಣ್ಯರಲ್ಲಿ ಕೇಳಿಕೊಂಡೆವು, ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ನಮ್ಮ ಮಗಳಿಗೆ ಏನಾಗುತ್ತದೆ ಎಂದು ತಿಳಿಯುತ್ತಿರಲಿಲ್ಲ, ಕೊನೆಗೆ ಪ್ರಧಾನಿ ನೆರವಿಗೆ ಧಾವಿಸಿದರು, ಏರ್ ಪೋರ್ಟ್ ನಿಂದ ಆಸ್ಪತ್ರೆಗೆ ತಲುಪುವರೆಗೂ ಊಹೆಗೂ ಮೀರಿದ ರೀತಿಯಲ್ಲಿ ನೆರವು ಸಿಕ್ಕಿತು, ಪ್ರಧಾನಿಯವರ ಸಹಕಾರಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಮಗುವಿನ ತಾಯಿ ಸಹಾಯವನ್ನು ಸ್ಮರಿಸಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದ್ದರಿಂದ ಮಗು ಅಪಾಯದಿಂದ ಪಾರಾಗಿದ್ದು, ಚೆತರಿಸಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ತಂದೆ ಕೇಂದ್ರ ಸರ್ಕಾರದ ಉದ್ಯಮವಾಗಿರುವ ಬ್ರಹ್ಮಪುತ್ರ ಕ್ರ್ಯಾಕರ್ ಮತ್ತು ಪಾಲಿಮರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos