ಕಲಾಪ ಆರಂಭಕ್ಕೆ ಮುನ್ನ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗ ಗುರುವಾರ ಆರಂಭಗೊಂಡಿದ್ದು, ಸದನದಲ್ಲಿ ಆರೋಗ್ಯಕರ ಚರ್ಚೆ ನಡೆಯುವುದನ್ನು ನಿರೀಕ್ಷಿಸುವುದಾಗಿ ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಮಸೂದೆ ಈ ಬಾರಿಯ ಅಧಿವೇಶನದಲ್ಲಿ ಅನುಮೋದನೆಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಎಸ್ಟಿ ಮಸೂದೆಯ ಪ್ರಕ್ರಿಯೆ ಈ ಅಧಿವೇಶನದಲ್ಲಿಯೇ ಪೂರ್ಣಗೊಳ್ಳುವ ವಿಶ್ವಾಸವಿದೆ. ಈ ಬಜೆಟ್ ಅಧಿವೇಶನದ ಎರಡನೇ ಅವಧಿಯ ಕಲಾಪದಲ್ಲಿ ದೇಶದ ಬಡಜನತೆಗೆ ಉಪಯೋಗವಾಗುವ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಈ ಬಾರಿಯ ಕಲಾಪದಲ್ಲಿ ವಿಷಯ ಮತ್ತು ಚರ್ಚೆಗಳು ಗುಣಮಟ್ಟದ್ದಾಗಿದ್ದು, ಬಡಜನತೆಗೆ ಸಂಬಂಧಪಟ್ಟ ವಿಷಯಗಳ ಚರ್ಚೆಗೆ ಒತ್ತು ನೀಡಲಾಗುವುದು ಎಂದು ಪ್ರಧಾನಿ ಹೇಳಿದರು.
ಬಜೆಟ್ ಅಧಿವೇಶನದ ಮೊದಲ ಅವಧಿಯ ಕಲಾಪ ಜನವರಿ 31 ರಂದು ಆರಂಭವಾಗಿ ಫೆಬ್ರವರಿ 9ರಂದು ಮುಕ್ತಾಯಗೊಂಡಿತ್ತು. ಈ ಸಂದರ್ಭದಲ್ಲಿ ಕೇಂದ್ರ ಬಜೆಟ್ ಮಂಡಿಸಿ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸಿ ಮುಂದೂಡಲಾಯಿತು.
ಹಳೆಯ 500 ಮತ್ತು 1000ದ ನೋಟುಗಳನ್ನು ಬಳಸುವುದನ್ನು ತಡೆಯಲು ಕಳೆದ ಬಜೆಟ್ ಅಧಿವೇಶನದಲ್ಲಿ ನಿಗದಿಪಡಿಸಿದ ಬ್ಯಾಂಕ್ ನೋಟುಗಳು (ಸೆಸ್ಸೇಷನ್ ಆಫ್ ಲಯಬಿಲಿಟೀಸ್ )ಕಾಯಿದೆ, 2017ನ್ನು ಅನುಮೋದಿಸಲಾಗಿತ್ತು.
ಈ ಬಾರಿಯ ಅಧಿವೇಶನದಲ್ಲಿ ಹಣಕಾಸು ಮಸೂದೆ ಅನುಮೋದನೆ ಹೊರತುಪಡಿಸಿ ಬಹುನಿರೀಕ್ಷಿತ ಜಿಎಸ್ಟಿ ಮಸೂದೆ ಅನುಮೋದನೆಯನ್ನು ಕೂಡ ಸರ್ಕಾರ ನಿರೀಕ್ಷಿಸುತ್ತಿದೆ.