ನವದೆಹಲಿ: ಭಾರತದ ಇಬ್ಬರು ಮುಸ್ಲಿಂ ಧರ್ಮ ಗುರುಗಳು ಪಾಕಿಸ್ತಾನದಲ್ಲಿ ನಾಪತ್ತೆಯಾಗಿರುವ ಪ್ರಕರಣದ ಹಿಂದೆ ಪಾಕ್ ಗುಪ್ತಚರ ಸಂಸ್ಥೆಗಳ ಕೈವಾಡವಿದೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ.
ತಮ್ಮ ಸಂಬಂಧಿಗಳನ್ನು ಭೇಟಿ ಮಾಡಲು ಕರಾಚಿಗೆ ತೆರಳಿದ್ದ ಹಜರತ್ ನಿಜಾಮುದ್ದೀನ್ ದರ್ಗಾದ ಧರ್ಮಗುರು ಸಯ್ಯದ್ ಆಸಿಫ್ ಅಲಿ ನಿಜಾಮಿ ಮತ್ತು ಸೂಫಿ ಧರ್ಮಗುರು ನಜಿಮ್ ನಿಜಾಮಿ ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದು, ಇದರ ಹಿಂದೆ ಪಾಕ್ ಗುಪ್ತಚರ ಸಂಸ್ಥೆಗಳ ಪಾತ್ರವಿದೆ ಎನ್ನಲಾಗುತ್ತಿದೆ.
ಇನ್ನು ಮೌಲ್ವಿಗಳ ನಾಪತ್ತೆ ಪ್ರಕರಣವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣ ಸಂಬಂಧ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಇಬ್ಬರು ಭಾರತೀಯರ ಕುರಿತ ಮಾಹಿತಿ ಹಾಗೂ ವರದಿಗಳನ್ನು ನವದೆಹಲಿಗೆ ನೀಡುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.
ಕಳೆದ ಬುಧವಾರ ಲಾಹೋರ್ ನಿಂದ ಕರಾಚಿಗೆ ಇಬ್ಬರು ಧರ್ಮಗುರುಗಳು ವಿಮಾನ ಹಿಡಿಯಬೇಕಾಗಿತ್ತು. ಆಸೀಫ್ ಗೆ ಕರಾಚಿಗೆ ತೆರಳಲು ಅನುಮತಿ ನೀಡಲಾಗಿತ್ತು. ಆದರೆ, ಪ್ರಯಾಣ ದಾಖಲೆಯಲ್ಲಿನ ತಪ್ಪುಗಳಿಂದಾಗಿ ನಝೀಮ್ ಅವರನ್ನು ಲಾಹೋರ್ ನಲ್ಲಿಯೇ ತಡೆಯಲಾಗಿತ್ತು. ಆದರೆ, ಇದೀಗ ನಝೀಮ್ ಲಾಹೋರ್ ವಿಮಾನ ನಿಲ್ದಾಣದಿಂದ, ಆಸೀಪ್ ಕರಾಚಿಯಿಂದ ನಾಪತ್ತೆಯಾಗಿದ್ದಾರೆಂದು ಅವರ ಕುಟುಂಬಸ್ಥರು ಹೇಳುತ್ತಿದ್ದಾರೆ.