ನವದೆಹಲಿ: ಸರ್ಕಾರಿ ಉದ್ಯೋಗ, ಶಾಲಾ-ಕಾಲೇಜು ಪ್ರವೇಶದಲ್ಲಿ ಮೀಸಲಾತಿಗೆ ಒತ್ತಾಯಿಸಿ ದೆಹಲಿ-ಎನ್ ಸಿಆರ್ ನಲ್ಲಿ ಪ್ರತಿಭಟನೆಗೆ ಸಜ್ಜಾಗಿರುವ ಜಾಟ್ ಸಮುದಾಯ ಇಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ್ ಅವರನ್ನು ಭೇಟಿ ಮಾಡಲಿದೆ ಎಂದು ಖಚಿತಪಡಿಸಿದೆ.
ಪ್ರತಿಭಟನೆಗೂ ಮುನ್ನ ತಮ್ಮನ್ನು ಭೇಟಿ ಮಾಡುವಂತೆ ಮನೋಹರ್ ಲಾಲ್ ಕಟ್ಟರ್ ಪ್ರತಿಭಟನಾಕಾರರನ್ನು ಒತ್ತಾಯಿಸಿದ್ದರು. ಇಂದು ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡುವುದಾಗಿ ಜಾಟ್ ಮುಖಂಡ ಯಶ್ ಪಾಲ್ ಮಲಿಕ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಕಟ್ಟರ್ ಸರ್ಕಾರ ಜಾಟ್ ಸಮುದಾಯದ ವಿಷಯ ಕುರಿತಾಗಿ ಗಂಭೀರವಾಗಿ ಚಿಂತಿಸಿದ್ದು ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಹೇಳಿದ್ದರು.
ಮೊನ್ನೆ 16ರಂದು ಪ್ರತಿಭಟನಾಕಾರರು ಮತ್ತು ಸರ್ಕಾರದ ಅಧಿಕಾರಿಗಳ ಮಧ್ಯೆ ಸಭೆ ನಡೆದು ಅದರಲ್ಲಿ ಕೆಲವೊಂದು ಗೊಂದಲಗಳು ಸೃಷ್ಟಿಯಾದವು. ಸರ್ಕಾರ ಪ್ರತಿಭಟನಾಕಾರರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ ಶಾಂತಿ, ಸೌಹಾರ್ದತೆಯನ್ನು ಕಾಪಾಡುವುದು ಅತಿ ಮುಖ್ಯವಾಗಿದೆ. ನಾವು ಸಮಸ್ಯೆಗಳನ್ನು ಬಗೆಹರಿಸಲು ಬದ್ಧರಾಗಿದ್ದೇವೆ ಎಂದು ಕಟ್ಟರ್ ತಿಳಿಸಿದ್ದಾರೆ.
ಈ ಮಧ್ಯೆ ನಾಳೆ ಪ್ರತಿಭಟನೆ ನಡೆಯಲಿರುವುದರಿಂದ ರಾಜ್ಯಾದ್ಯಂತ 124 ಅರೆಸೇನಾಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸಂಚಾರ ಸಲಹೆಗಳನ್ನು ಹೊರಡಿಸಿದ್ದಾರೆ. ಇಂದು ರಾತ್ರಿ 11.30ರಿಂದ ದೆಹಲಿಯ ಹೊರಹೋಗುವ ಮತ್ತು ಬರುವ ಎಲ್ಲಾ ರೈಲು ಸೇವೆಗಳನ್ನು ದೆಹಲಿ ಮೆಟ್ರೊ ರೈಲು ನಿಗಮ ರದ್ದುಪಡಿಸಿದೆ.
ನಾಳೆ ದೆಹಲಿಯಲ್ಲಿ ಪ್ರತಿಭಟನೆ ಆರಂಭಿಸುವುದಾಗಿ ಜಾಟ್ ಪ್ರತಿಭಟನಾಕಾರರು ಘೋಷಿಸಿದ್ದಾರೆ.