ಲಖನೌ: ಉತ್ತರ ಪ್ರದೇಶದ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿರುವ ನಿಯೋಜಿತ ಸಿಎಂ ಯೋಗಿ ಆದಿತ್ಯನಾಥ್ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, (ಎಲ್ಲರ ಜೊತೆಗೂ ಎಲ್ಲರ ವಿಕಾಸ) ಎಂಬುದೇ ತಮ್ಮ ಆಡಳಿತದ ಮಂತ್ರ ಎಂಬ ಹೇಳಿಕೆ ನೀಡಿದ್ದು, ಮೋದಿ ಹಾದಿಯಲ್ಲೇ ಸಾಗುವ ನಿರೀಕ್ಷೆ ಮೂಡಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಂತೆಯೇ ಯೋಗಿ ಆದಿತ್ಯನಾಥ್ ಸಿಎಸ್ ಹಾಗೂ ಸರ್ಕಾರದ ಅಧಿಕಾರಿಗಳಿಗೆ ನೀಡಿರುವ ಮೊದಲ ಆದೇಶವೂ ಅವರೊಬ್ಬ ಜನಪ್ರಿಯ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸೂಚನೆಗೆ ಪೂರಕವಾಗಿಯೇ ಇರುವಂತಿದೆ. ಅದೇನೆಂದರೆ ಪದಗ್ರಹಣದ ಸಮಾರಂಭ, ಸಂಭ್ರಮಾಚರಣೆಗಳು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಬಾರದು ಎಂಬುದಾಗಿದೆ.
ಆಡಳಿತಕ್ಕೆ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ ವೇಳೆಯಲ್ಲಿ ಯೋಗಿ ಆದಿತ್ಯನಾಥ್ ಈ ಸೂಚನೆ ನೀಡಿದ್ದು ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡದಂತೆ ಕ್ರಮ ಕೈಗೊಳ್ಳಿ ಎಂದಿದ್ದಾರೆ.