ಹಮಿರ್ಪುರ: ನನ್ನ ವಿರುದ್ಧದ ಆರೋಪಗಳು ಪೂರ್ವನಿಯೋಜಿತ ಆರೋಪಗಳಾಗಿದ್ದು, ಬಿಜೆಪಿ ನನ್ನ ವಿರುದ್ಧ ಪಿತೂರಿ ನಡೆಸಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಶನಿವಾರ ಹೇಳಿದ್ದಾರೆ.
ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ನಿನ್ನೆಯಷ್ಟೇ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಸಿಂಗ್ ವಿರುದ್ದ ವಿಚಾರಣೆ ಹಾಗೂ ಬಂಧನಕ್ಕೆ ತಡೆ ನೀಡಲು ನಿರಾಕರಿಸಿತ್ತು. ಈ ಮೂಲಕ ಸಿಬಿಐ ಆಧಿಕಾರಿಗಳಿಗೆ ಸುಗಮ ಹಾದಿಯನ್ನು ಮಾಡಿಕೊಟ್ಟಿತ್ತು. ಇದರ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಇಂದು ವೀರಭದ್ರ ಸಿಂಗ್ ಹಾಗೂ ಅವರ ಪತ್ನಿ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವೀರಭದ್ರ ಸಿಂಗ್ ಅವರು, ಬಿಜೆಪಿ ಪಕ್ಷ ಹಾಗೂ ನಾಯಕರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಹೋರಾಟ ಆರಂಭವಾಗಿದೆ. ಶೀಘ್ರದಲ್ಲಿಯೇ ಸತ್ಯಾಂಶ ಹೊರಬರಲಿದೆ. ನನ್ನ ವಿರುದ್ಧವಿರುವ ಎಲ್ಲಾ ಆರೋಪಗಳು ಪೂರ್ವನಿಯೋಜಿತವಾದದ್ದು. ಪ್ರೇಮ್ ಕುಮಾರ್ ಮತ್ತು ಅನುರಾಗ್ ಠಾಕೂರ್ ರಂತಹ ಬಿಜೆಪಿ ನಾಯಕರು ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ. ಆರೋಪದಲ್ಲಿ ಯಾವುದೇ ಸತ್ಯಾಂಶಗಳಿಲ್ಲ ಎಂದು ತಿಳಿಸಿದ್ದಾರೆ.