ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರನ ಕುರಿತು ಸುಳಿವು ನೀಡಿದವರಿಗೆ ರೂ.10 ಲಕ್ಷ ಬಹುಮಾನ ನೀಡುವುದಾಗಿ ಅಧಿಕಾರಿಗಳು ಶುಕ್ರವಾರ ಘೋಷಣೆ ಮಾಡಿದ್ದಾರೆ.
ಉಗ್ರನ ಕುರಿತಂತೆ ಪೋಸ್ಟರ್ ಗಳನ್ನು ಬೀದಿ ಬೀದಿಗಳಲ್ಲಿ ಅಂಟಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಉಗ್ರನ ಕುರಿತು ಮಾಹಿತಿ ನೀಡಿದವರಿಗೆ ರೂ.10 ಲಕ್ಷ ಇನಾಮು ನೀಡುವುದಾಗಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ಘಟಕದ ಮೇಲೆ ದಾಳಿ ಮಾಡಿದ್ದ ಉಗ್ರರು, ರೂ.4.92 ಲಕ್ಷ ದರೋಡೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆಯಾದ ಕೆಲವೇ ದಿನಗಳಲ್ಲಿ ಕಾಲ್ಗಾಂ ಬ್ಯಾಂಕ್ ವಾಹನವೊಂದರ ಮೇಲೆ ದಾಳಿ ಮಾಡಿದ್ದ ಉಗ್ರರು ಇಬ್ಬರು ಸಿಬ್ಬಂದಿಗಳು ಹಾಗೂ 5 ಮಂದಿ ಪೊಲೀಸನ್ನು ಹತ್ಯೆ ಮಾಡಿ ರೂ.50 ಲಕ್ಷ ಹಣವನ್ನು ದೋಚಿದ್ದರು.