ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಆಶಿಶ್ ಖೆತನ್ ಅವರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿದ್ದು, ಈ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬೆದರಿಕೆ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಶನಿವಾರ ಆಗ್ರಹಿಸಿದ್ದಾರೆ.
'ಅಶಿಶ್ ಖೆತನ್ ಅವರಿಗೆ ಬೆದರಿಕೆ ಪತ್ರ ಬಂದಿರುವುದು ನೋಡಿ ನನಗೆ ಶಾಕ್ ಆಯಿತು. ರಾಜನಾಥ್ ಸಿಂಗ್ ಅವರು ಈ ಕುರಿತು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ' ಎಂದು ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದಾರೆ.
ಬಲ ಪಂಥೀಯ ಶಕ್ತಿಗಳಿಂದ ತಮಗೆ ಜೀವ ಬೆದರಿಕೆ ಪತ್ರ ಬಂದಿದೆ ಎಂದು ಆಶಿಶ್ ಖೆತನ್ ಅವರು ಆ ಪತ್ರವನ್ನು ಟ್ವೀಟರ್ ನಲ್ಲಿ ಪೊಸ್ಟ್ ಮಾಡಿದ್ದಾರೆ.
ಶುಕ್ರವಾರ ರಾತ್ರಿ ತಮಗೆ ಈ ಪತ್ರ ಬಂದಿದ್ದು, ಪತ್ರದಲ್ಲಿ 'ನಿಮ್ಮನ್ನು ಕೊಲ್ಲುವ ಸಮಯ ಬಂದಿದೆ' ಎಂದು ಬರೆದಿರುವುದಾಗಿ ಖೆತನ್ ತಿಳಿಸಿದ್ದಾರೆ.