ಮುಂಬೈ: ಇತ್ತೀಚಿಗಷ್ಟೇ ಆರಂಭವಾದ ರಿಪಬ್ಲಿಕ್ ಟಿವಿಯ ಸಂಸ್ಥಾಪಕ ಅರ್ನಬ್ ಗೋಸ್ವಾಮಿ ಹಾಗೂ ಅದರ ಪತ್ರಕರ್ತೆ ಪ್ರೇಮಾ ಶ್ರೀದೇವಿ ಅವರ ವಿರುದ್ಧ ಟೌಮ್ಸ್ ಗ್ರೂಪ್ ಬುಧವಾರ ಹಕ್ಕುಸ್ವಾಮ್ಯ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದೆ.
ಕಳೆದ ಮೇ 6ರಂದು ರಿಪಬ್ಲಿಕ್ ಟಿವಿಯು ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಶಹಾಬುದ್ದೀನ್ ನಡುವಿನ ದೂರವಾಣಿ ಸಂಭಾಷಣೆಯನ್ನು ಪ್ರಸಾರ ಮಾಡಿತ್ತು. ಅಲ್ಲದೆ ಈ ಹಿಂದೆ ಟೈಮ್ಸ್ ನೌನಲ್ಲಿ ವರದಿಗಾರ್ತಿಯಾಗಿದ್ದ ಪ್ರೇಮಾ ಶ್ರೀದೇವಿ ಅವರು ಸುನಂದಾ ಪುಷ್ಕರ್ ಮತ್ತು ಅವರ ಮನೆಗೆಲಸದ ಸಹಾಯಕ ನಾರಾಯಣ್ ಅವರೊಂದಿಗೆ ಮಾತನಾಡಿದ್ದ ದೂರವಾಣಿ ಸಂಭಾಷಣೆಯನ್ನು ರಿಪಬ್ಲಿಕ್ ಟಿವಿಯು ಮೇ 8ರಂದು ಪ್ರಸಾರ ಮಾಡಿತ್ತು.
ರಿಪಬ್ಲಿಕ್ ಟಿವಿ ಪ್ರಸಾರ ಮಾಡಿದ್ದ ಈ ಎರಡೂ ದೂರವಾಣಿ ಸಂಭಾಷಣೆಗಳ ಹಕ್ಕುಸ್ವಾಮ್ಯವು ತನಗೆ ಸೇರಿದ್ದು ಎಂದಿರುವ ಟೈಮ್ಸ್ ಗ್ರೂಪ್ ಖ್ಯಾತಿಯ ಬೆನೆಟ್, ಕೋಲ್ಮನ್ ಅಂಡ್ ಕೊ ಲಿಮಿಟೆಡ್ (ಬಿಸಿಸಿಎಲ್) ಅರ್ನಬ್ ಮತ್ತು ಪ್ರೇಮಾ ಶ್ರೀದೇವಿ ಅವರ ವಿರುದ್ಧ ಮುಂಬೈನ ಆಜಾದ್ ಮೈದಾನ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಅರ್ನಬ್ ಈ ಹಿಂದೆ ಬಿಸಿಸಿಎಲ್ ಒಡೆತನದ ಟೈಮ್ಸ್ ನೌ ಸುದ್ದಿವಾಹಿನಿಯ ಪ್ರಧಾನ ಸಂಪಾದಕರಾಗಿದ್ದರು.