ತಿರುಪತಿ: ಜಗತ್ತಿನಾದ್ಯಂತ ಆತಂಕ ಮೂಡೀಸಿರುವ ’ವಾನ್ನಾ ಕ್ರೈ’ ರಾನ್ಸಮ್ ವೇರ್ ಸೈಬರ್ ದಾಳಿಯ ಬಿಸಿ ತಿರುಪತಿ ದೇವಾಲಯಕ್ಕೂ ತಟ್ಟಿದ್ದು, ತಿರುಪತಿ ದೇವಾಲಯದ ಕಂಪ್ಯೂಟರ್ ಗಳೂ ಹ್ಯಾಕ್ ಆಗಿವೆ.
ಆಡಳಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಬಳಕೆ ಮಾಡಲಾಗುವ 22 ಕಂಪ್ಯೂಟರ್ ಗಳಿಗೆ ರಾನ್ಸಮ್ ವೇರ್ ವೈರಸ್ ಆಟಾಕ್ ಆಗಿದ್ದು, ಟಿಸಿಎಸ್ ನೆರವಿನೊಂದಿಗೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದ್ದು 20 ಕಂಪ್ಯೂಟರ್ ಗಳನ್ನು ಸ್ಥಗಿತಗೊಳಿಸಿರುವುದಾಗಿ ಟಿಟಿಡಿ ಆಡಳಿತ ಮಂಡಳಿ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆಡಳಿತ ವ್ಯವಸ್ಥೆ ಕಾರ್ಯನಿರ್ವಾಹಕ ಅನಿಲ್ ಕುಮಾರ್ ಸಿಂಘಾಲ್, ಟಿಕೆಟ್ ಮಾರಾಟ ಹಾಗೂ ಭಕ್ತಾದಿಗಳಿಗೆ ಸಂಬಂಧಿಸಿದ ಸೇವೆ ಒದಗಿಸುವ ಕಂಪ್ಯೂಟರ್ ಗಳು ಮಾತ್ರ ಹ್ಯಾಕ್ ಆಗಿದ್ದು, ಇದರಿಂದ ಭಕ್ತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನೆರವಿನೊಂದಿಗೆ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವುದಾಗಿ ಆಡಳಿತ ವ್ಯವಸ್ಥೆ ಕಾರ್ಯನಿರ್ವಾಹಕ ಅನಿಲ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.