ಉಜ್ಜಯಿನಿ: ಇಲ್ಲಿನ ಪ್ರಖ್ಯಾತ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಹೊಸ ಪೂಜಾ ವಿಧಾನಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಕೂಡ ದೇವಸ್ಥಾನದ ಆಡಳಿತ ಮಂಡಳಿ ಕೋರ್ಟ್ ಆದೇಶವನ್ನು ಮುಕ್ತವಾಗಿ ಗಾಳಿಗೆ ತೂರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುತ್ತಿದೆ ಎಂದು ವಾಹಿನಿ ವರದಿ ಮಾಡಿದೆ.
ದೇವಸ್ಥಾನದ ಅರ್ಚಕರೊಬ್ಬರು ಶಿವಲಿಂಗವನ್ನು ಬಟ್ಟೆಯಿಂದ ಮುಚ್ಚದೆ ಬಾಸ್ಮ ಆರ್ತಿಯನ್ನು ನೆರವೇರಿಸುವುದರ ವಿಡಿಯೊವಿದ್ದು ಅದರಲ್ಲಿ ಸುಪ್ರೀಂ ಕೋರ್ಟ್ ನ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡುಬರುತ್ತಿದೆ ಎಂದು ವಾಹಿನಿಯ ವಿಡಿಯೊದಲ್ಲಿ ತೋರಿಸಲಾಗಿದೆ.
ಉಜ್ಜಯಿನಿಯ ಮಹಾಕಾಳೇಶ್ವರ ಶಿವಲಿಂಗದ ಸುರಕ್ಷತೆ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿ, ಜಲಾಭಿಷೇಕಕ್ಕೆ ಗಂಗಾಜಲಕ್ಕೆ ಬದಲು ಆರ್ ಒ ನೀರನ್ನು ಮಾತ್ರ ಬಳಸುವಂತೆ ಆದೇಶ ನೀಡಿತ್ತು.
ಬಾಸ್ಮ್ ಆರತಿ ಸಂದರ್ಭದಲ್ಲಿ ಶಿವಲಿಂಗದ ಅರ್ಧದಷ್ಟು ಮಾತ್ರ ಬಟ್ಟೆಯಿಂದ ಮುಚ್ಚಲಾಗುತ್ತದೆ. ಸುಪ್ರೀಂ ಕೋರ್ಟ್ ನ ಹೊಸ ಆದೇಶ ಪ್ರಕಾರ, ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಶಿವಲಿಂಗವನ್ನು ಪೂರ್ತಿಯಾಗಿ ಮುಚ್ಚಬೇಕಾಗುತ್ತದೆ.
ಜಲಾಭಿಷೇಕಕ್ಕೆ ಕೂಡ ಷರತ್ತುಗಳನ್ನು ಹೇರಲಾಗಿದ್ದು 1.25 ಲೀಟರ್ ಹಾಲು ಅಥವಾ ಪಂಚಾಮೃತವನ್ನು ಬಳಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಪ್ರತಿದಿನ ಸಾಯಂಕಾಲ 5 ಗಂಟೆಗೆ ಜಲಾಭಿಷೇಕದ ನಂತರ ಶಿವಲಿಂಗವನ್ನು ಸ್ವಚ್ಛಗೊಳಿಸಿ ಬಟ್ಟೆಯಿಂದ ಚೆನ್ನಾಗಿ ಒರೆಸಿಡಬೇಕು ಎಂದು ಸೂಚಿಸಲಾಗಿತ್ತು.
ದೇವಾಲಯದ ಗರ್ಭಗುಡಿಯೊಳಗಿರುವ ಶಿವಲಿಂಗದ ಗಾತ್ರ ಕಿರಿದಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಾರ್ಗಸೂಚಿಗಳನ್ನು ನೀಡಿ ಆದೇಶ ನೀಡಿತ್ತು.