ನವದೆಹಲಿ: ಗುರು ಗ್ರಾಮದ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿಯ ಭೀಕರ ಹತ್ಯೆ ಪ್ರಕರಣದ ಆರೋಪಿಯನ್ನು ಬಾಲಾಪರಾಧಿ ಎಂದು ಪರಿಗಣಿಸದೆ ವಯಸ್ಕ ಅಪರಾಧಿ ಎಂದು ಪರಿಗಣಿಸಿ ಆತನಿಗೆ ಕಠಿಣ ಶಿಕ್ಷೆ ನೀಡುವಂತೆ ಮೃತ ವಿದ್ಯಾರ್ಥಿ ಪ್ರದ್ಯುಮನ್ ಠಾಕೂರ್ ತಂದೆ ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಬಂಧಿತ ಬಸ್ ಕಂಡಕ್ಟರ್ ಗೆ ಕ್ಲೀನ್ ಚಿಟ್ ನೀಡಿದ್ದ ಸಿಬಿಐ 11ನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಿತ್ತು. ಅಲ್ಲದೆ ವಿಚಾರಣೆ ವೇಳೆ ಬಂಧಿತ ವಿದ್ಯಾರ್ಥಿ ತಾನೇ ಪ್ರದ್ಯುಮನ್ ಠಾಕೂರ್ ನನ್ನು ಹತ್ಯೆ ಮಾಡಿರುವುದಾಗಿ ಹೇಳಿರುವುದಾಗಿ ಸಿಬಿಐ ಮಾಹಿತಿ ನೀಡಿತ್ತು.
ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಪ್ರದ್ಯುಮನ್ ಠಾಕೂರ್ ತಂದೆ ಸುಶೀಲ್ ತೆಕ್ರಿವಾಲ್ ನನ್ನ ಮಗನನ್ನು ಹತ್ಯೆ ಮಾಡಿರುವವನನ್ನು ಬಾಲಾಪರಾಧಿ ಎಂದು ಪರಿಗಣಿಸದೇ ವಯಸ್ಕ ಅಪರಾಧಿ ಎಂದು ಪರಿಗಣಿಸಿ ಆತನನ್ನು ಗೆಲ್ಲಿಗೇರಿಸಿ ಎಂದು ಆಗ್ರಹಿಸಿದ್ದಾರೆ.
ಆರೋಪಿ ಪ್ರಥಮ ಪಿಯು ವಿದ್ಯಾರ್ಥಿಯನ್ನು ಮೂರು ದಿನಗಳ ಸಿಬಿಐ ವಶಕ್ಕೆ ನೀಡಿ ಬಾಲಾಪರಾಧಿ ನ್ಯಾಯ ಮಂಡಳಿ ಆದೇಶ ನೀಡಿದೆ. ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿದ್ದ ಸಿಬಿಐ, ಹತ್ಯೆ ಘೋರ ಅಪರಾಧವಾಗಿದ್ದರಿಂದ ಆರೋಪಿಯನ್ನು ಬಾಲಾಪರಾಧಿ ಎಂದು ಪರಿಗಣಿಸದೇ ವಯಸ್ಕ ಅಪರಾಧಿ ಎಂದು ಪರಿಗಣಿಸಬೇಕೆಂದು ಸಿಬಿಐ ಮನವಿ ಮಾಡಿತ್ತು. ಸಿಬಿಐ ನ ಮನವಿಯನ್ನು ಆಲಿಸಿರುವ ಬಾಲಾಪರಾಧಿ ನ್ಯಾಯಮಂಡಳಿ ಆರೋಪಿಯನ್ನು 3 ದಿನಗಳ ವಶಕ್ಕೆ ನೀಡಿದೆ.
ಆರೋಪಿ ವಿದ್ಯಾರ್ಥಿ ಪರೀಕ್ಷೆ ಹಾಗೂ ಪೋಷಕರು-ಶಿಕ್ಷಕರ ಸಭೆಯನ್ನು ಮುಂದೂಡಲು ಸಹಕಾರಿಯಾಗುತ್ತದೆ ಎಂಬ ದುರಾಲೋಚನೆಯಿಂದ ಪ್ರದ್ಯುಮನ್ ಎಂಬ ವಿದ್ಯಾರ್ಥಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಸಿಬಿಐ ಮಾಹಿತಿ ನೀಡಿದೆ.
ಸೆಪ್ಟೆಂಬರ್ 8ರಂದು ಎಂದಿನಂತೆ ಶಾಲೆಗೆ ತೆರಳಿದ್ದ ಪ್ರದ್ಯುಮನ್ ಠಾಕೂರ್ ಮೃತದೇಹ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.