ದೇಶ

ರಯಾನ್‌ ಕೊಲೆ ಪ್ರಕರಣ: ತಂದೆಯ ಎದುರೇ ತಪ್ಪೊಪ್ಪಿಕೊಂಡ 11ನೇ ತರಗತಿ ವಿದ್ಯಾರ್ಥಿ

Lingaraj Badiger
ನವದೆಹಲಿ: ಗುರುಗ್ರಾಮದ ರಯಾನ್ ಇಂಟರ್ ನ್ಯಾಷನಲ್ ಶಾಲೆಯ 2ನೇ ತರಗತಿಯ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದ 11ನೇ ತರಗತಿಯ ವಿದ್ಯಾರ್ಥಿ ತನ್ನ ತಂದೆ ಹಾಗೂ ಮತ್ತೊಬ್ಬ ಸ್ವತಂತ್ರ ಸಾಕ್ಷಿದಾರನ ಮುಂದೆಯೇ ತಪ್ಪೊಪ್ಪಿಕೊಂಡಿರುವುದಾಗಿ ಸಿಬಿಐ ಗುರುವಾರ ಬಾಲಾಪರಾಧ ನ್ಯಾಯಾಲಯಕ್ಕೆ ತಿಳಿಸಿದೆ.
ತಾನು 2ನೇ ತರಗತಿಯ ವಿದ್ಯಾರ್ಥಿ ಪ್ರದ್ಯುಮ್ನನನ್ನು ಕತ್ತು ಸೀಳಿ ಕೊಂದಿರುವುದಾಗಿ 11ನೇ ತರಗತಿ ವಿದ್ಯಾರ್ಥಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಿಬಿಐ ಕೋರ್ಟ್ ಗೆ ತಿಳಿಸಿದೆ.
ಪ್ರದ್ಯುಮ್ನನ ಕೊಲೆ ಕೃತ್ಯದಲ್ಲಿ ಇತರ ವ್ಯಕ್ತಿಗಳು ಶಾಮೀಲಾಗಿದ್ದಾರೆಯೇ ಎಂಬುದನ್ನು ತನಿಖೆ ಮಾಡುವ ಸಲುವಾಗಿ ಕೊಲೆ ಆರೋಪಿ 11ನೇ ತರಗತಿಯ ವಿದ್ಯಾರ್ಥಿಯನ್ನು ಮೂರು ದಿನಗಳ ಕಾಲ ತನ್ನ ವಶಕ್ಕೆ ನೀಡಬೇಕು ಎಂದು ಸಿಬಿಐ ನಿನ್ನೆ ಬಾಲಾಪರಾಧ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಮನವಿ ಪುರಸ್ಕರಿಸಿದ ನ್ಯಾಯಾಲಯ ಆರೋಪಿ ಬಾಲಕನನ್ನು ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಆದೇಶಿಸಿತ್ತು.
ಪ್ರದ್ಯುಮ್ನನ ಕೊಲೆಗೆ ಬಳಸಲಾದ ಚೂರಿಯನ್ನು ಆರೋಪಿ ಬಾಲಕನು ಯಾವ ಅಂಗಡಿಯಲ್ಲಿ ಖರೀದಿಸಿದ್ದ ಎಂಬುದನ್ನು ಆತನಿಂದಲೇ ತಿಳಿಯಲು ಮತ್ತು ಇತರ ಕೆಲವು ಸಂಬಂಧಿತ ಸಾಕ್ಷ್ಯಗಳನ್ನು ಸಂಗ್ರಹಿಸಲು ಆರೋಪಿ ಬಾಲಕನನ್ನು ಸಿಬಿಐ ವಶಕ್ಕೆ ಪಡೆದಿತ್ತು.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಬಾಲಕನು, 'ಶಾಲೆಯಲ್ಲಿ ಪುಂಡ ಹುಡುಗನಾಗಿದ್ದು, ಓದಿನಲ್ಲಿ ಹಿಂದಿದ್ದ. ಶಾಲೆಗೆ ಬರುವಾಗ ಕೆಲವೊಮ್ಮೆ ಚೂರಿಯನ್ನು ತರುತ್ತಿದ್ದ. ಚಿಕ್ಕ ಮಕ್ಕಳನ್ನು ಹೊಡೆದು ಹಿಂಸಿಸಿ ಅವರಿಗೆ ಭಯ ಹುಟ್ಟಿಸುತ್ತಿದ್ದ. ಎಲ್ಲಕ್ಕಿಂತ ಮೇಲಾಗಿ  ಆತನಿಗೆ ಇಂಟರ್‌ನೆಟ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವ ಅಭ್ಯಾಸವಿತ್ತು ಮತ್ತು ಪ್ರದ್ಯುಮ್ನನನ್ನು ಕೊಲೆ ಮಾಡುವ ಹಿಂದಿನ ದಿನವೂ ಪೋರ್ನ್ ಚಿತ್ರವನ್ನು ವೀಕ್ಷಿಸಿದ್ದ, ಹೆತ್ತವರು ಮತ್ತು ಶಿಕ್ಷಕರ ಸಭೆ ಮುಂದಕ್ಕೆ ಹೋಗುವಂತೆ ಮತ್ತು ಅದರೊಂದಿಗೆ ಪರೀಕ್ಷೆಗಳೂ ಮುಂದಕ್ಕೆ ಹೋಗುವಂತೆ ನಾನು ಏನಾದರೂ ಮಾಡುವೆ ಎಂದು ಸಹ ವಿದ್ಯಾಥಿಗಳಲ್ಲಿ ಕೊಚ್ಚಿಕೊಂಡಿದ್ದ ಎಂಬ ಮಾಹಿತಿಗಳನ್ನು ಸಿಬಿಐ ಕಲೆ ಹಾಕಿತ್ತು. 
ಇನ್ನು ತಮ್ಮ ಮಗನನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿಯನ್ನು ಬಾಲಾಪರಾಧಿ ಎಂದು ಪರಿಗಣಿಸದೆ ವಯಸ್ಕ ಅಪರಾಧಿ ಎಂದು ಪರಿಗಣಿಸಿ ಆತನಿಗೆ ಕಠಿಣ ಶಿಕ್ಷೆ ನೀಡುವಂತೆ ಮೃತ ವಿದ್ಯಾರ್ಥಿ ಪ್ರದ್ಯುಮನ್ ಠಾಕೂರ್ ತಂದೆ ಆಗ್ರಹಿಸಿದ್ದಾರೆ. 
SCROLL FOR NEXT