ಶ್ರೀನಗರ: ಶೀಘ್ರದಲ್ಲೇ ಗಲಭೆ ಪೀಡಿತ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಗುಂಡು ನಿರೋಧಕ ಜಾಕೆಟ್ ಮತ್ತು ವಾಹನಗಳನ್ನು ಪೂರೈಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿದ್ದು ಪೊಲೀಸ್ ದಾಖಲೆಗಳ ಪ್ರಕಾರ ಉಗ್ರರ ನಡುವಿನ ಕಾಳಗದಲ್ಲಿ ಈ ವರ್ಷ ಒಟ್ಟಾರೆ 26 ಪೊಲೀಸರು ಹುತಾತ್ಮರಾಗಿದ್ದಾರೆ. ಹೀಗಾಗಿ ಗಲಭೆ ಪೀಡಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಬುಲೆಟ್ ಪ್ರೂಫ್ ಜಾಕೆಟ್ ಮತ್ತು ವಾಹನವನ್ನು ಪೂರೈಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಲಭೆ ಪೀಡಿತ ಪ್ರದೇಶದ ಎಲ್ಲಾ ಪೊಲೀಸ್ ಠಾಣೆಗಳಿಗೆ ಗುಂಡು ನಿರೋಧಕ ವಾಹನ ಮತ್ತು ಜಾಕೆಟ್ ನೀಡಲು ಗೃಹ ಇಲಾಖೆ ಮುಂದಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಎಸ್ಪಿ ವೈದ್ ಹೇಳಿದ್ದಾರೆ.
ಸದ್ಯ 150 ಗುಂಡು ನಿರೋಧಕ ವಾಹನಗಳನ್ನು ಖರೀದಿ ಮಾಡಲಾಗಿದೆ. ಈಗಾಗಲೇ ಗಲಭೆ ಪೀಡಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಯೋಧರಿಗೂ ಗುಂಡು ನಿರೋಧಕ ಜಾಕೆಟ್ ಮತ್ತು ರಕ್ಷಾ ಕವಚಗಳನ್ನು ನೀಡಲಾಗಿದೆ ಎಂದು ವೈದ್ ಹೇಳಿದ್ದಾರೆ.