ನವದೆಹಲಿ: ಕೇಂದ್ರ ಸರ್ಕಾರದ ಅಧಿಕ ಮೌಲ್ಯದ ನೋಟು ನಿಷೇಧದ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿರುವ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಪಿ. ಚಿದಂಬರಂ, ಸರ್ಕಾರದ ನಿರ್ಧಾರ ದೊಡ್ಡ ತಪ್ಪಾಗಿದ್ದು, ಇದರ ಜಾರಿಯ ನಂತರವೂ ದೇಶದಲ್ಲಿ ಭ್ರಷ್ಟಾಚಾರ ಬೆಳೆಯುತ್ತಿದೆ ಎಂದು ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಚಿದಂಬಂರಂ, ನೋಟುಗಳ ಅನಾಣ್ಯೀಕರಣ ಜಾರಿಗೆ ಬಂದು ಒಂದು ವರ್ಷದ ನಂತರವೂ ಸರ್ಕಾರ ನಿರ್ಣಯಕ್ಕಾಗಿ ನೀಡುವ ಪ್ರತಿ ಸಮರ್ಥನೆಯೂ ಖಂಡನೀಯವಾದುದು ಎಂದು ಹೇಳಿದ್ದಾರೆ.
ನೋಟುಗಳ ಅನಾಣ್ಯೀಕರಣದ ಒಂದು ವರ್ಷದ ನಂತರ ಆರ್ ಬಿಐಗೆ ಹಿಂತಿರುಗಿದ 15,28,000 ಕೋಟಿ ರೂಪಾಯಿಗಳಲ್ಲಿ ಕೇವಲ 41 ಕೋಟಿ ರೂಪಾಯಿ ನಕಲಿ ನೋಟುಗಳು ಎಂದು ಹೇಳುತ್ತಿದೆ. ಹೀಗಾಗಿ ನೋಟುಗಳ ಅನಾಣ್ಯೀಕರಣ ಭಾರತದಲ್ಲಿ ನಕಲಿ ನೋಟುಗಳ ಹಾವಳಿ ನಿಯಂತ್ರಣಕ್ಕೆ ಉತ್ತರವಲ್ಲ ಎಂದು ಚಿದಂಬರಂ ಹೇಳಿದ್ದಾರೆ.