ನವದೆಹಲಿ: ಮಸೀದಿಯನ್ನು ಎಲ್ಲಿ ಬೇಕಾದರೂ ನಿರ್ಮಿಸಬಹುದು. ಆದರೆ, ರಾಮ ಜನ್ಮಭೂಮಿಯಲ್ಲಿ ಅಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಮಂಗಳವಾರ ಹೇಳಿದ್ದಾರೆ.
ಅಯೋಧ್ಯೆ ವಿವಾದವನ್ನು ಇತ್ಯರ್ಥಪಡಿಸುವ ಕುರಿತಂತೆ ಧಾರ್ಮಿಕ ಗುರು ರವಿ ಶಂಕರ್ ಅವರು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದು, ನ.16 ರಂದು ಅಯೋಧ್ಯೆಗೆ ಭೇಟಿ ನೀಡುವುದಾಗಿ ಇತ್ತೀಚೆಗಷ್ಟೇ ರವಿ ಶಂಕರ್ ಅವರು ಹೇಳಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸುಬ್ರಮಣಿಯನ್ ಸ್ವಾಮಿಯವರು, ಮಸೀದಿಯನ್ನು ಎಲ್ಲಿ ಬೇಕಾದರೂ ಕಟ್ಟಬಹುದು. ನಮಾಜ್ ಓದುವ ಸ್ಥಳ ಮಸೀದಿಯಾಗಿದೆ. ಸೌದಿ ಅರೇಬಿಯಾದಲ್ಲಿ ಮಸೀದಿ ಕುಸಿದು ಬಿದ್ದಿತ್ತು. ಬಳಿಕ ಮಸೀದಿಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅದೇ ರೀತಿ ಭಾರತದಲ್ಲೂ ಬಾಬ್ರಿ ಮಸೀದಿಯನ್ನು ಹೆಚ್ಚು ಮುಸ್ಲಿಮರು ಇರುವ ಅಂಬೇಡ್ಕರ್ ಜಿಲ್ಲೆಯಗಳ ಗಡಿಗಳಲ್ಲಿ ಸ್ಥಳಾಂತರ ಮಾಡಬಹುದು ಎಂದು ಹೇಳಿದ್ದಾರೆ.
ದೇಶದಲ್ಲಿ 40,000 ದೇಗುಲಗಳನ್ನು ಧ್ವಂಸ ಮಾಡಲಾಗಿತ್ತು. ನಾವು ಅದಾವುದನ್ನೂ ಕೇಳುತ್ತಿಲ್ಲ. ಕೇವಲ 3 ದೇಗುಲಗಳನ್ನು ನಿರ್ಮಾಣ ಮಾಡಲು ಆಗ್ರಹಿಸುತ್ತಿದ್ದೇವೆ. ಮಥುರಾದಲ್ಲಿ ಕೃಷ್ಣ ದೇಗುಲ, ಅಯೋಧ್ಯೆಯಲ್ಲಿ ರಾಮ ದೇಗುಲ ಹಾಗೂ ವಾರಣಾಸಿಯಲ್ಲಿ ಕಾಶಿ ವಿಶ್ವನಾಥನ ದೇಗುಲ ನಿರ್ಮಾಣ ಮಾಡುವಂತೆ ಆಗ್ರಹಿಸುತ್ತಿದ್ದೇವೆಂದು ತಿಳಿಸಿದ್ದಾರೆ.