ಲಖನೌ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್ ವಿಶೇಷ ಸಲಹೆಯೊಂದನ್ನು ನೀಡಿದ್ದು, ಅದರಂತೆ ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಲಖನೌನಲ್ಲಿ ಮಸೀದಿಯನ್ನು ನಿರ್ಮಾಣ ಮಾಡಬಹುದು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ವಸೀಂ ರಿಝ್ವಿ ಇಂತಹುದೊಂದು ಸಲಹೆ ನೀಡಿದ್ದು, ಇದರಿಂದ ವಿವಾದ ಇತ್ಯರ್ಥ ಸಾಧ್ಯ ಎಂದು ಹೇಳಿದ್ದಾರೆ. ಈ ಸಂಬಂಧ ತಾವು ಈಗಾಗಲೇ ಸಾಕಷ್ಟು ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿದ್ದು, ಅವರು ಕೂಡ ತಮ್ಮ ಈ ಸಲಹೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆಯೋಧ್ಯೆ ವಿವಾದ ಶಾಂತಿ ಮತ್ತು ಸೌಹಾರ್ಧಯುತವಾಗಿ ಅಂತ್ಯಕಾಣಬೇಕು ಎಂಬ ಉದ್ದೇಶದಿಂದ ತಾವು ಈ ಹಿಂದೆ ಸಾಕಷ್ಟು ಧಾರ್ಮಿಕ ಮುಖಂಡರೊಂದಿಗೆ ತಮ್ಮ ಈ ಸಲಹೆ ಕುರಿತು ಚರ್ಚಿಸಲಾಗಿತ್ತು ಎಂದು ಹೇಳಿದ್ದಾರೆ.
ಅಂತೆಯೇ ಇದೇ ಡಿಸೆಂಬರ್ 5ರಂದು ಇದೇ ಸಲಹೆಯನ್ನು ಸುಪ್ರೀಂ ಕೋರ್ಟ್ ಗೂ ಸಲ್ಲಿಸುವ ಕುರಿತು ಅಯೋಧ್ಯೆಯಲ್ಲಿರುವ ಮಹಾಂತರೊಂದಿಗೆ ಚರ್ಚಿಸುತ್ತಿರುವುದಾಗಿ ರಿಝ್ವಿ ಹೇಳಿದ್ದಾರೆ. ಇತ್ತೀಚೆಗೆ ತಾವು ದಾಮೋದರ ದಾಸ್ ಮಹಾಂತರು ಸೇರಿದಂತೆ ವಿವಿಧ ಹಿಂಧೂ ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿದ್ದೇವೆ. ವಿವಾದ ಶಾಂತಿಯುತವಾಗಿ ಮತ್ತು ಸೌಹಾರ್ಧಯುತವಾಗಿ ಈಡೇರಬೇಕು ಎಂಬುದು ನಮ್ಮ ಉದ್ದೇಶ ಎಂದು ರಿಜ್ವಿ ಹೇಳಿದ್ದಾರೆ.