ಪಟ್ನಾ: ಬಿಹಾರದ 15 ಕೋಟಿ ರೂ.ಟಾಯ್ಲೆಟ್ ಹಗರಣವು ರಾಜ್ಯದ ರಾಜಕಾರಣವನ್ನು ತಲೆತಗ್ಗಿಸುವಂತೆ ಮಾಡಿದೆ. ಈ ನಡುವೆ ಪಾಟ್ನಾ ಸಮೀಪದ ಹಳ್ಳಿಯೊಂದರ ದಲಿತ ಮಹಿಳೆತನ್ನ ಮಂಗಳ ಸೂತ್ರ ಮಾರಾಟ ಮಾಡಿ ಬಂದ ಹಣದಲ್ಲಿ ತನ್ನ ಮನೆಗೊಂದು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಈ ಕಾರ್ಯದ ಮೂಲಕ ಆಕೆ ಸುತ್ತಲಿನ ಜನರಿಗೆ ಮಾದರಿಯಾಗಿದ್ದಾರೆ.
ಫತುಹಾ ಬ್ಲಾಕ್ ನ ವರುನಾ ಹಳ್ಳಿಯ ನಿವಾಸಿ ರಂಕಿ ದೇವಿ, ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂದು ಪತಿ ಪರಶುರಾಮ್ ಪಾಸ್ವಾನ್ ಬಳಿ ಕೇಳಿದಾಗಲೆಲ್ಲಾ ಆಕೆ ನಿಂದನೆ ಮಾತುಗಳನ್ನೇ ಕೇಳಬೇಕಾಗುತ್ತಿತ್ತು. ಗ್ರಾಮವನ್ನು ಬಯಲು ಬಹಿರ್ದೆಶೆ ಮುಕ್ತ ಮಾಡುವ ಸರ್ಕಾರದ ಕ್ರಮಕ್ಕೆ ಪತಿ ನಿರಾಸಕ್ತಿ ತೋರಿದ್ದ ಕಾರಣ ತನ್ನ ಮಾಂಗಲ್ಯ ಸರವನ್ನೇ ಮಾರಾಟ ಮಾಡಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ.
ಈಕೆಯ ಮಾಂಗಲ್ಯ ಸರದ ಮಾರಾಟದಿಂದಲೂ ಬಂದದ್ದು ಕೇವಲ 9 ಸಾವಿರ ರೂ. ಮಾತ್ರ. ಆಗ ಆಕೆ ತನ್ನ ಕಿವಿಯೋಲೆಗಳನ್ನೂ ಸಹ ಮಾರಿದ್ದು ಅದರಿಂದ ಬಂದ 4 ಸಾವಿರವನ್ನೂ ಸೇರಿಸಿಕೊಂಡು ಶೌಚಾಲಯ ನಿರ್ಮಿಸಿದ್ದಾರೆ. "ತಾನು ಸಿಮೆಂಟ್, ಇಟ್ಟಿಗೆಗಳನ್ನು ಮನೆಗೆ ತಂದ ಸಮಯದಲ್ಲಿ ಪತಿ ಗೊಂದಲಕ್ಕೆ ಸಿಲುಕಿದರು. ನಾನು ನನ್ನ ಮಂಗಳಸೂತ್ರ ಮಾತಾಋಅ ಮಾಡಿ ಶೌಚಾಲಯ ಕಟ್ಟಿಸುತ್ತೇನೆ ಎಂದಾಗ ಅವರಿಗೆ ಸಿಟ್ಟು ಬಂದಿತ್ತು. ಆದರೆ ಶೀಘ್ರದಲ್ಲೇ ಅವರು ನನ್ನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದರಲ್ಲದೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದರು." ಆಕೆ ಹೇಳಿದರು.
ಇದೀಗ ಆಕೆಯ ಇಬ್ಬರು ಹೆಣ್ಣು ಮಕ್ಕಳು ಸಹ ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
"ಇದು ಗ್ರಾಮೀಣ ಮಹಿಳೆಯಿಂದ ಆದ ಆದರ್ಶಪ್ರಾಯ ಕಾರ್ಯವಾಗಿದೆ ಮತ್ತು ಅದು ಧನಾತ್ಮಕ ಸಾಮಾಜಿಕ ಸಂದೇಶವನ್ನು ಸಾರುತ್ತದೆ "ಎಂದು ಭಾನುವಾರ ವಿಶ್ವ ಶೌಚಾಲಯ ದಿನದಂದು ಬುಧಬೆಚಕ್ ಗ್ರಾಮದಲ್ಲಿ ಆಯೋಜಿಸಲಾದ ಮಹಿಳಾ ಸ್ವಸಹಾಯ ಗುಂಪುಗಳ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಫತುಹಾ ಬಿ.ಡಿ.ಒ ರಾಕೇಶ್ ಕುಮಾರ್ ಹೇಳಿದರು. ಆಕೆಯ ತ್ಯಾಗಕ್ಕೆ ಅಧಿಕೃತ ಪಾದಾನ್ಯತೆ ದೊರಕಿದೆ. ಸರ್ಕಾರ ಆಕೆ ಶೌಚಾಲಯಕ್ಕೆ ಮಾಡಿದ ಖರ್ಚನ್ನು ಮರುಪಾವತಿಸಲಿದೆ ಎಂದು ಆಶಿಸಲಾಗಿದೆ.