ಮುಂಬೈ: "ಭಾರತ್ದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ನೈರ್ಮಲ್ಯದ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಾನು ಭಾಗವಹಿಸುತ್ತೇನೆ. ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಬಯಕೆ ಸದ್ಯಕ್ಕೆ ನನ್ನಲ್ಲಿಲ್ಲ." ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಇಂದು ಮುಂಬೈ ನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಹೇಳಿದ್ದಾರೆ. ಈಕೆ 'ಬ್ಯೂಟಿ ವಿತ್ ಪರ್ಪಸ್' ಸ್ಪರ್ಧೆಯ ಸಹ ವಿಜೇತೆಯಾಗಿದ್ದು ಅಲ್ಲಿ ಅವರು ತಮ್ಮ ಯೋಜನೆಯಾದ 'ಶಕ್ತಿ' ಯನ್ನು ಮಂಡಿಸಿದ್ದಾರೆ. ಇದು ಗ್ರಾಮೀಣ ಭಾರತದ ಮಹಿಳೆಯರಿಗೆ ಸ್ಯಾನಿಟರಿ ನಾಪ್ ಕಿನ್ ಪೂರೈಕೆಗೆ ಸಂಬಂಧಿಸಿದೆ.
"ನಾನು ಈ ಯೋಜನೆಯನ್ನು ಪ್ರಾರಂಭಿಸಿದಾಗ, ಋತುಚಕ್ರದ ಸಮಯದಲ್ಲಿನ ಶುಚಿತ್ವದ ಬಗ್ಗೆ ಮತ್ತು ಸ್ಯಾನಿಟರಿ ನ್ಯಾಪ್ ಕಿನ್ ಉಪಯೋಗದ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ ಎನ್ನುವುದನ್ನು ಅರಿತುಕೊಂಡೆ. ನಾವು ಅದರ ಬಗೆಗೆ ಜನರಿಗೆ ತಿಳುವಳಿಕೆ ನಿಡಬೇಕು ಎನ್ನುವುದನ್ನು ಅರಿತೆನು. ಈ ವಿಶ್ವ ಸುಂದರಿ ಪಟ್ಟವು ಕೇವಲ ಬಾಹ್ಯ ಸೌಂದರ್ಯಕ್ಕಾಗಿ ಮಾತ್ರವೇ ಇಲ್ಲ. ನೀವು ಇದನ್ನು ಯಾವುದೇ ಒಳ್ಳೆಯ ಉದ್ದೇಶಕ್ಕೆ ಹೇಗೆ ಬಳಸಿಕೊಳ್ಳಬಲ್ಲಿರಿ ಎನ್ನುವುದು ಮುಖ್ಯ.
""ಮುಟ್ಟಿನ ಸಮಯದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಬಗೆಗೆ ಜಾಗೃತಿಯನ್ನು ಮೂಡಿಸುವುದರಲ್ಲಿ ನನ್ನ ಪಾತ್ರ ಮಹತ್ವವಾಗಿರುವುದಕ್ಕೆ ನನಗೆ ಸಂತಸವಿದೆ. ಇದಕ್ಕಾಗಿ ನಾನು ಇತರೆ ವಿಶ್ವ ಸುಂದರಿ ಪ್ರಶಸ್ತಿ ವಿಜೇತರೊಡನೆ ಸೇರಿಕೊಳ್ಳುತ್ತೇನೆ. ಈ ಕೆಲಸದಲ್ಲಿ ತೊಡಗಿಕೊಳ್ಳಲು ನಾನು ಉತ್ಸುಕಳಾಗಿದ್ದೇನೆ." ಮಾನುಷಿ ಛಿಲ್ಲರ್ ಹೇಳಿದರು.