ಮೊರ್ಬಿಯಲ್ಲಿ ಇಂದು ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಅಹಮದಾಬಾದ್: ಜಿಎಸ್ ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೇಶವನ್ನು ಲೂಟಿ ಮಾಡಿದವರು ಮಾತ್ರ ಡಯಾಯಿತಿ ಬಗ್ಗೆ ಯೋಚನೆ ಮಾಡಬಹುದಷ್ಟೆ ಎಂದು ಟೀಕಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಗೆ ಸೌರಾಷ್ಟ್ರದ ಮೊರ್ಬಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಅವರು, ಕೈ ಪಂಪ್ ಗಳಂತಹ ಸಣ್ಣಪುಟ್ಟ ಯೋಜನೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದೆ ಎಂದು ಹೇಳಿದರು. ಜನರ ಉಪಯೋಗಕ್ಕಾಗಿ ನರ್ಮದಾ ಯೋಜನೆಯಂತಹ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.
ಗುಜರಾತ್ ನಲ್ಲಿ ಚುನಾವಣಾ ಪ್ರಚಾರವನ್ನು ಬಿರುಸಿನಿಂದ ಮುಂದುವರಿಸಿದ ಅವರು, ದೇಶವನ್ನು ಲೂಟಿ ಮಾಡಿದವರು ಮಾತ್ರ ಡಕಾಯಿತಿ ಬಗ್ಗೆ ಯೋಚನೆ ಮಾಡಬಹುದು. ಸೌರಾಷ್ಟ್ರದಲ್ಲಿ ಡಿಸೆಂಬರ್ 9ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರನ್ನು ಪ್ರಸ್ತಾಪಿಸಿದ ಪ್ರಧಾನಿ, ಇಂದಿರಾ ಗಾಂಧಿಯವರು ಮೊರ್ಬಿಗೆ ಬಂದಿದ್ದಾಗ ನನಗೀಗಲೂ ನೆನಪಿದೆ, ಅವರು ಮೂಗಿಗೆ ಕರ್ಚೀಫ್ ಮುಚ್ಚಿಕೊಂಡಿದ್ದ ಫೋಟೋ ಚಿತ್ರಲೇಖ ಮ್ಯಾಗಜಿನ್ ನಲ್ಲಿ ಪ್ರಕಟವಾಗಿತ್ತು. ಅಲ್ಲಿನ ವಾಸನೆ ತಾಳಲಾರದೆ ಮೂಗಿಗೆ ಕರ್ಚೀಫ್ ಮುಚ್ಚಿಕೊಂಡಿದ್ದರು. ಆದರೆ ಆರ್ಎಸ್ಎಸ್, ಜನಸಂಘಗಳಿಗೆ ಮೊರ್ಬಿ ಕ್ಷೇತ್ರದ ರಸ್ತೆಗಳು ಸುವಾಸನೆ ಬೀರುತ್ತಿವೆ, ಇಲ್ಲಿ ಮಾನವೀಯತೆಯ ಸುವಾಸನೆಯಿದೆ ಎಂದು ಹೇಳಿದರು.
ಕೈ ಪಂಪ್ ಗಳಂತಹ ಸಣ್ಣ ಪುಟ್ಟ ಯೋಜನೆಗಳನ್ನು ನೀಡುವುದು ಕಾಂಗ್ರೆಸ್ ನ ಅಭಿವೃದ್ಧಿ ಮಾದರಿಯಾಗಿದೆ. ಆದರೆ ಬಿಜೆಪಿಗೆ ಸೌರಾಷ್ಟ್ರ ಪ್ರದೇಶಕ್ಕೆ ನರ್ಮದಾ ನೀರು ಯೋಜನೆಯನ್ನು ನೀಡುವುದಾಗಿದೆ. ಇಲ್ಲಿ ಅಪಾರ ಪೈಪ್ ಲೈನ್ ಮೂಲಕ ಸೌರಾಷ್ಟ್ರದುದ್ದಕ್ಕೂ ಅಣೆಕಟ್ಟುಗಳಲ್ಲಿ ನೀರು ತುಂಬಿಸುವುದು ಅಭಿವೃದ್ಧಿಯ ಮಾದರಿ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos