ನವದೆಹಲಿ: ದೆಹಲಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಅವಧಿಪೂರ್ವ ಜನಿಸಿದ ಅವಳಿ ಮಕ್ಕಳು ಮೃತಪಟ್ಟಿವೆ ಎಂದು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಪೋಷಕರಿಗೆ ನೀಡಿದ್ದರು. ಆದರೆ ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಒಂದು ಮಗು ಬದುಕಿರುವುದು ಪೋಷಕರ ಗಮನಕ್ಕೆ ಬಂದಿದೆ.
ನಿನ್ನೆ ದೆಹಲಿಯ ಶಾಲಿಮಾರ್ ಭಾಗ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಆಗತಾನೆ ಜನಿಸಿದ ಅವಳಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಮಕ್ಕಳ ಮೃತದೇಹಗಳನ್ನು ಪೋಷಕರಿಗೆ ಹಸ್ತಾಂತರಿಸಿತ್ತು. ಪೋಷಕರು ಮಕ್ಕಳ ಅಂತ್ಯಸಂಸ್ಕಾರಕ್ಕೆ ಸ್ಮಶಾನಕ್ಕೆ ತೆರಳಿದ್ದಾಗ ಒಂದು ಮಗು ಬದುಕಿರುವುದು ಕಂಡು ಬಂದಿದೆ.
ತಕ್ಷಣ ಪೋಷಕರು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೋಷಕರು ಮತ್ತು ಸಂಬಂಧಿಕರು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಇಂದು ಪ್ರತಿಭಟನೆ ನಡೆಸಿ ಆಸ್ಪತ್ರೆಯ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪೊಲೀಸರಿಗೆ ದೂರು ಸಹ ನೀಡಿದ್ದಾರೆ.
ಇನ್ನು ಈ ಕುರಿತು ಆಸ್ಪತ್ರೆ ಸ್ಪಷ್ಟನೆ ನೀಡಿದ್ದು, ಮಕ್ಕಳು ಅವಧಿಗೂ ಮುನ್ನ ಜನಿಸಿದ್ದವು. ತಪಾಸಣೆ ಮಾಡಿದಾಗ ಎರಡೂ ಮಕ್ಕಳು ಮೃತಪಟ್ಟಿದ್ದವು. ಆದರೆ, ಒಂದು ಮಗು ಬದುಕಿರುವುದು ಪವಾಡವೇ ಸರಿ. ಇದೊಂದು ಅಪರೂಪದ ಪ್ರಕರಣವಾಗಿದ್ದು, ತನಿಖೆ ಆದೇಶಿಸಲಾಗಿದೆ. ನಿರ್ಲಕ್ಷ್ಯಕ್ಕೆ ಕಾರಣರಾದ ವೈದ್ಯರನ್ನು ರಜೆಗೆ ಕಳುಹಿಸಲಾಗಿದೆ. ಪಾಲಕರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos