ನವದೆಹಲಿ: ಅತ್ಯಾಚಾರಿ ಬಾಬಾ ರಾಮ್ ರಹೀಂ ಜೊತೆಗಿನ ಸಂಬಂಧದ ಕುರಿತ ಮಾತನಾಡಿರುವ ಆತನ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್, ಒಬ್ಬ ತಂದೆ ತನ್ನ ಮಗಳನ್ನ ಪ್ರೀತಿಯಿಂದ ಮುಟ್ಟಬಾರದೇ? ಎಂದು ಪ್ರಶ್ನಿಸಿದ್ದಾರೆ.
ಅತ್ಯಾಚಾರ ಪ್ರಕರಣ ಸಂಬಂಧ ಬಾಬಾ ರಾಮ್ ರಹೀಂ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಹನಿಪ್ರೀತ್ ಇನ್ಸಾನ್, ತಮ್ಮ ಮತ್ತು ಬಾಬಾ ರಾಮ್ ರಹೀಂ ಕುರಿತಾದ ಅಕ್ರಮ ಸಂಬಂಧದ ಆರೋಪದ ಕುರಿತು ಕಿಡಿಕಾರಿದ್ದಾರೆ. ನ್ಯೂಸ್ 24 ಸುದ್ದಿವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಹನಿಪ್ರೀತ್ ಇನ್ಸಾನ್, ನನ್ನ ಮತ್ತು ಬಾಬಾ ರಾಮ್ ರಹೀಂ ರ ನಡುವೆ ಯಾವುದೇ ರೀತಿಯ ಅಕ್ರಮ ಸಂಬಂಧಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನನ್ನ ಮತ್ತು ಬಾಬಾ ನಡುವೆ ದೈಹಿಕ ಸಂಪರ್ಕವಿತ್ತು ಎಂಬ ತನ್ನ ಮಾಜಿ ಪತಿ ವಿಶ್ವಾಸ್ ಗುಪ್ತಾ ಅವರ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಪದೇ ಪದೇ ಸುಳ್ಳು ಹೇಳುವ ಮೂಲಕ ಜನಕ ಭಾವನೆಯಲ್ಲಿ ಅದೇ ಸತ್ಯ ಎಂಬಂತಾಗಿದೆ. ಇದರಿಂದ ತಾನು ತೀವ್ರ ಮುಜುಗರಕ್ಕೊಳಗಾಗಿದ್ದು, ನೋವು ತಾಳಲಾರದೇ ಇದೀಗ ಬಹಿರಂಗವಾಗಿ ಹೇಳಿಕೆ ನೀಡಲು ಮುಂದೆ ಬಂದಿದ್ದೇನೆ. ನನ್ನ ಮತ್ತು ಬಾಬಾ ನಡುವೆ ಯಾವುದೇ ರೀತಿಯ ಅಕ್ರಮ ಸಂಬಂಧವಿಲ್ಲ. ಒಬ್ಬ ತಂದೆಯೊಂದಿಗೆ ಮಗಳ ಸಲುಗೆಯಿಂದ ಇರಬಾರದೇ? ಅಥವಾ ಒಬ್ಬ ತಂದೆ ತನ್ನ ಮಗಳನ್ನು ಪ್ರೀತಿಯಿಂದ ಮುಟ್ಟಬಾರದೇ..? ಹಾಗೆಂದ ಮಾತ್ರಕ್ಕೆ ಅವರಿಬ್ಬರ ನಡವೆ ಅಕ್ರಮ ಸಂಬಂಧ ಕಲ್ಪಿಸುವುದು ತಪ್ಪು ಎಂದು ಹನಿಪ್ರೀತ್ ಹೇಳಿದ್ದಾರೆ.
ಇದೇ ವೇಳೆ ತಮ್ಮ ವಿರುದ್ಧದ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿರುವ ಹನಿಪ್ರೀತ್, ನಾನು ಯಾವ ನೇಪಾಳಕ್ಕೆ ಪರಾರಿಯಾಗಿರಲಿಲ್ಲ. ದೇಶ ಬಿಡುವ ಪರಿಸ್ಥಿತಿ ನನಗೆ ಬಂದಿಲ್ಲ. ಭಾರತೀಯ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಇದೆ. ಹರ್ಯಾಣ ಮತ್ತು ಪಂಜಾಬ್ ಹೈ ಕೋರ್ಟ್ ಗೆ ನಾನು ತೆರಳುತ್ತೇನೆ ಎಂದು ಹನಿಪ್ರೀತ್ ಹೇಳಿದ್ದಾರೆ. ನನ್ನ ವಕೀಲರೊಂದಿಗೆ ಮಾತನಾಡಿ ಅವರಿಂದ ಕಾನೂನು ಸಲಹೆ ಪಡೆದ ಬಳಿಕ ಶರಣಾಗುತ್ತೇನೆ ಎಂದು ಹನಿಪ್ರೀತ್ ಹೇಳಿದ್ದಾರೆ.
ನಾಳೆ ಹನಿಪ್ರೀತ್ ಶರಣಾಗತಿ ಸಾಧ್ಯತೆ
ಇದೇ ವೇಳೆ ಹನಿಪ್ರೀತ್ ಇನ್ಸಾನ್ ನಾಳೆ ಅಂದರೆ ಬುಧವಾರ ಹರ್ಯಾಣ ಮತ್ತು ಪಂಜಾಬ್ ಹೈ ಕೋರ್ಟ್ ಗೆ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಸ್ತುತ ತಮ್ಮ ವಕೀಲರೊಂದಿಗೆ ಕಾನೂನು ಸಲಹೆ ಪಡೆಯುತ್ತಿರುವ ಹನಿಪ್ರೀತ್ ನಾಳೆ ಬೆಳಗ್ಗೆ ಅಥವಾ ಸಂಜೆ ನ್ಯಾಯಾಲಯಕ್ಕೆ ತೆರಳಿ ಶರಣಾಗಲಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos