ಲಖನೌ: ಉತ್ತರಪ್ರದೇಶದ ಎಲ್ಲಾ ಮದರಸಾಗಳಲ್ಲೂ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದ ಉತ್ತರಪ್ರದೇಶ ಸರ್ಕಾರದ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿದ್ದು, ನ್ಯಾಯಾಲಯದ ತೀರ್ಪನ್ನು ಶಿಯಾ ಮೌಲ್ವಿಗಳು ಸ್ವಾಗತಿಸಿದ್ದಾರೆ.
ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಕುರಿತಂತೆ ನ್ಯಾಯಾಲಯ ನೀಡಿರುವ ತೀರ್ಪು ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಿಯಾ ಮೌಲ್ವಿ ಯಾಸೂಬ್ ಅಬ್ಬಾಸ್ ಅವರು, ಧರ್ಮಕ್ಕಿಂತಲೂ ದೇಶವೇ ಹೆಚ್ಚು. ಅಲಹಾಬಾದ್ ನ್ಯಾಯಾಲಯ ತೀರ್ಪವನ್ನು ನಾನು ಸ್ವಾಗತಿಸುತ್ತೇನೆಂದು ಹೇಳಿದ್ದಾರೆ.
ರಾಷ್ಟ್ರಗೀತೆಯನ್ನು ಪ್ರತೀಯೊಬ್ಬರೂ ಹಾಡಬೇಕು. ರಾಷ್ಟ್ರಗೀತೆಯನ್ನು ಯಾರೊಬ್ಬರೂ ಅವಮಾನಿಸಬಾರದು. ಧರ್ಮಿಕ್ಕಿಂತಲೂ ದೇಶ ಹೆಚ್ಚು ಎಂದು ತಿಳಿಸಿದ್ದಾರೆ.
ಎಲ್ಲಾ ಮದರಸಾಗಳಲ್ಲೂ ರಾಷ್ಟ್ರಗೀತೆಯನ್ನು ಹಾಡಬೇಕು ಎಂದು ಈ ಹಿಂದೆ ಉತ್ತರಪ್ರದೇಶ ಸರ್ಕಾರ ಸೂಚನೆ ನೀಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿ ರಾಷ್ಟ್ರಗೀತೆ ಹಾಡುವುದಕ್ಕೆ ವಿನಾಯಿತಿ ನೀಡಬೇಕೆಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಸಲಾಗಿತ್ತು.
ಈ ಅರ್ಜಿಯನ್ನು ನ್ಯಾಯಾಲಯದ ವಜಾಗೊಳಿಸಿದ್ದು, ರಾಷ್ಟ್ರಗೀತೆ ಹಾಡುವುದು ಹಾಗೂ ರಾಷ್ಟ್ರಧ್ವಜ ಹಾರಿಸುವುದು ಪ್ರತಿಯೊಬ್ಬ ನಾಗರೀಕನಿಗೂ ಸಂವಿಧಾನ ನೀಡಿರುವ ಕರ್ತವ್ಯ ಎಂದು ಪ್ರತಿಪಾದಿಸಿದೆ. ಅಲ್ಲದೆ, ಧರ್ಮ, ಭಾಷೆ, ಜನಾಂಗದ ಆಧಾರದಲ್ಲಿ ಈ ಕರ್ತವ್ಯಕ್ಕೆ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.