ಪುದುಕೊಟ್ಟೈ: ಕಳೆದ ವರ್ಷ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡಿನ ಅಂದಿನ ಸಿಎಂ ದಿ.ಜಯಲಲಿತಾರನ್ನು ತಾನು ನೋಡಿಯೋ ಇರಲಿಲ್ಲ ಎಂದು ತಮಿಳುನಾಡು ಪ್ರವಾಸೋದ್ಯಮ ಸಚಿವ ವೆಳ್ಳಮಂಡಿ ನಟರಾಜನ್ ಹೇಳಿದ್ದಾರೆ.
ಪುದುಕೋಟೈನಲ್ಲಿ ಮಾತನಾಡಿರುವ ಸಚಿವ ವೆಳ್ಳಮಂಡಿ ನಟರಾಜನ್ ಅವರು, ಅಮ್ಮಾ ಅಪೋಲೊ ಆಸ್ಪತ್ರೆಯಲ್ಲಿದ್ದಾಗ ನಾನು ಅವರನ್ನು ನೋಡಿರಲಿಲ್ಲ. ಆಸ್ಪತ್ರೆಯ ಎರಡನೇ ಅಂತಸ್ತಿನವರೆಗೆ ಮಾತ್ರ ನಾವು ಹೋಗಬಹುದಿತ್ತು. ಅಲ್ಲಿಂದ ಮುಂದೆ ಅವರ ಕೋಣೆಗೆ ಯಾರನ್ನೂ ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಏಕಸದಸ್ಯ ವಿಚಾರಣಾ ಆಯೋಗದ ಮುಂದೆ ಈ ಬಗ್ಗೆ ಹೇಳಿಕೆ ನೀಡಲು ಸಿದ್ಧನಿದ್ದೇನೆ ಎಂದೂ ವೆಳ್ಳಮಂಡಿ ನಟರಾಜನ್ ಹೇಳಿಕೆ ನೀಡಿದ್ದು, ಆಯೋಗವು ನನ್ನನ್ನು ಕರೆಸಿ ವಿಚಾರಿಸಿದರೆ ನಾನು ಈ ಸತ್ಯವನ್ನು ತಿಳಿಸುತ್ತೇನೆ. ವಾಸ್ತವದಲ್ಲಿ ಎಲ್ಲ ಸಚಿವರೂ ಆಯೋಗದ ಎದುರು ಹೇಳಿಕೆ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.
ತೀವ್ರ ವಿವಾದಕ್ಕೆ ಕಾರಣವಾಗಿದ್ದ ಜಯಾ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ನಾಯಕರೇ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಶಂಕೆ ಮೂಡಿಸಿದ್ದರು. ಪಕ್ಷ ಮುಖಂಡ ದಿಂಡಿಗಲ್ ಶ್ರೀನಿವಾಸನ್ ಸೇರಿದಂತೆ ಹಲವು ಸಚಿವರು ತಮಗೆ ಜಯಲಲಿತಾರನ್ನು ನೋಡುವ ಅವಕಾಶವಿರಲಿಲ್ಲ ಎಂದು ಹೇಳಿದ್ದರೆ, ಇನ್ನು ಕೆಲವು ಸಚಿವರು ತಾವು ಜಯಲಲಿತಾರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾಗಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದರು. ಇದೇ ಕಾರಣಕ್ಕೆ ಜಯಾ ಸಾವು ವಿವಾದವಾಗಿ ಮಾರ್ಪಟ್ಟಿತ್ತು.
ಇದೀಗ ತಮಿಳುನಾಡು ರಾಜ್ಯ ಸರ್ಕಾರವು ಸೆಪ್ಟೆಂಬರ್ 22ರಂದು ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸಲು ಮದ್ರಸಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ.ಆರ್ಮುಗಸಾಮಿ ಅವರ ಏಕಸದಸ್ಯ ಆಯೋಗವನ್ನು ರಚಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos