ರಘುರಾಮ್ ರಾಜನ್ (ಸಂಗ್ರಹ ಚಿತ್ರ)
ನವದೆಹಲಿ: ಕೇಂದ್ರ ಸರ್ಕಾರದ ಮುಂದಾಲೋಚನೆ ಇಲ್ಲದ ನೋಟು ನಿಷೇಧ ಜಾರಿಯನ್ನು ವಿರೋಧಿಸಿದ್ದಕ್ಕೇ ಅಂದಿನ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಗೆ ಗೇಟ್ ಪಾಸ್ ನೀಡಲಾಗಿತ್ತು ಎಂದು ಶಿವಸೇನೆ ಕೇಂದ್ರ ಸರ್ಕಾರವನ್ನು ಟೀಕಿಸಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ನೋಟು ನಿಷೇಧ ಪ್ರಕ್ರಿಯೆನ್ನು ಕಟುವಾಗಿ ಟೀಕಿಸಿರುವ ಶಿವಸೇನೆ, ಅಂದಿನ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರು, ಕೇಂದ್ರ ಸರ್ಕಾರ ಜಾರಿ ಮಾಡಬೇಕು ಎಂದಿದ್ದ ನೋಟು ನಿಷೇಧವನ್ನು ವಿರೋಧಿಸಿದ್ದರು. ಇದೇ ಕಾರಣಕ್ಕೆ ಉತ್ತಮ ಕೆಲಸದ ಹೊರತಾಗಿಯೂ ಅವರನ್ನು ಮುಂದಿನ ಅವಧಿ ಕೇಂದ್ರ ಸರ್ಕಾರ ಮುಂದುರೆಸಲಿಲ್ಲ. ರಘುರಾಮ್ ರಾಜನ್ ಅವರು ಆರ್ಥಿಕ ಕ್ಷೇತ್ರಕ್ಕೆ ಸಲ್ಲಿಸಿದ್ದ ಗಣನೀಯ ಸೇವೆಯನ್ನು ಗಮನಿಸಿ ನೊಬೆಲ್ ಪ್ರಶಸ್ತಿ ಪಟ್ಟಿಗೆ ಸೇರಿಸಲಾಗಿದೆ. ಇಂತಹ ವ್ಯಕ್ತಿಯನ್ನೇ ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಶಿವಸೇನೆ ಹೇಳಿದೆ. ಅಲ್ಲದೇ ಕೇಂದ್ರ ಸರ್ಕಾರದ ನೋಟು ನಿಷೇಧ ಪ್ರಕ್ರಿಯೆಯನ್ನು ಸ್ವತಃ ಕೇಂದ್ರ ಸಚಿವರೇ ಪರೋಕ್ಷವಾಗಿ ಖಂಡಿಸಿದ್ದರು.
ಕೇಂದ್ರ ಸಾರಿಗೆ ಸಚಿವರಾಗಿದ್ದ ನಿತಿನ್ ಗಡ್ಕರಿ ಅವರು ನೋಟು ನಿಷೇಧದಿಂದ ಜನಪರಿತಪಿಸುವಂತಾಗಿದೆ ಎಂದು ಹೇಳಿದ್ದರು. ಗಡ್ಕರಿ ನೇರ ಮತ್ತು ನಿಷ್ಠುರ ನಡೆಯ ವ್ಯಕ್ತಿಯಾಗಿದ್ದು, ಅವರ ಹೇಳಿಕೆಯನ್ನು ಪಕ್ಷ ತಿರಸ್ಕರಿಸಿತ್ತು. ಇದಕ್ಕೆ ವ್ಯತಿರಿಕ್ತ ಎನ್ನುವ ರೀತಿಯಲ್ಲಿ ಅರುಣ್ ಜೇಟ್ಲಿ ಹೇಳಿಕೆ ನೀಡಿದ್ದರು. ಯಾವ ಹೇಳಿಕೆಯನ್ನು ಪರಿಗಣಿಸಬೇಕು ಎನ್ನುವುದು ಅವರ ಪಕ್ಷ ವಕ್ತಾರರ ಕೆಲಸವಷ್ಟೇ.. ನೋಟು ನಿಷೇಧ ಪ್ರಕ್ರಿಯೆ ಕೇವಲ ಕಪ್ಪು ಹಣವನ್ನು ಬಿಳಿಯಾಗಿಸುವ ದೊಡ್ಡ ಷಡ್ಯಂತ್ರವಷ್ಟೇ..ಇದರಿಂದ ದೇಶದ ಬಡವರಿಗೆ ಯಾವುದೇ ಪ್ರಯೋಜನವಾಗಿಲ್ಲ. ಕಪ್ಪುಹಣ ಇಟ್ಟಿದ್ದ ಶ್ರೀಮಂತರು ಮಾತ್ರ ತಮ್ಮ ಹಣವನ್ನು ಬಿಳಿಯಾಗಿಸಿಕೊಂಡರು ಎಂದು ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos