ನವದೆಹಲಿ: ಆರ್ ಎಸ್ ಎಸ್ ನ ಹಿರಿಯ ಮುಖ್ಯಸ್ಥ ಮೋಹನ್ ಭಾಗವತ್ ಇದೇ ಮೊದಲ ಬಾರಿಗೆ ಹಿರಿಯ ಅಧಿಕಾರಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರ ಜತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಭಾಗವತ್ ನಾಗ್ ಪುರ ದಲ್ಲಿ ದಸರಾ ವೇಳೆ ತಾವು ಮಾಡಿದ್ದ ಭಾಷಣದಲ್ಲಿನ ಅಂಶಗಳ ಕುರಿತು ವಿಚಾರ ವಿನಿಮಯ ನಡೆಸಿದರು.
ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರು, ಗೋ ಸಂರಕ್ಷಣೆ, ಪಶ್ಚಿಮ ಬಂಗಾಳ, ಕೇರಳ ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಭಾಗವತ್ ಸಭೆಯಲ್ಲಿ ಪಾಲ್ಗೊಂಡಿದ್ದ ಸೇವಾ ನಿರತ ಹಾಗೂ ನಿವೃತ್ತಿ ಹೊಂದಿರುವ ಐಎಎಸ್, ಐಪಿಎಸ್, ಐಆರ್ಎಸ್ ಅಧಿಕಾರಿಗಳು ಹಾಗೂ ಕಾರ್ಪೊರೇಟ್ ವಲಯದ ಪ್ರಮುಖರೊಂದಿಗೆ ಸಂವಾದ ನಡೆಸಿದರು.
ಆರ್ ಎಸ್ ಎಸ್ ಧ್ಯೇಯೋದ್ದೇಶದ ವಿವರಣೆ ನೀಡಲಾಗಿದ್ದ ಈ ಸಭೆಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಸಲಹೆ ಸೂಚನೆಗಳು ಸಿಕ್ಕಿದವು ಎನ್ನಲಾಗಿದೆ. ಬ್ರಿಟಿಷರ ಕಾಲದ ಶಿಷ್ಟಾಚಾರವನ್ನು ಕೊನೆಗಾಣಿಸಿ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಮತ್ತು ಮೌಲ್ಯಗಳಿಗೆ ಗೌರವ ಒದಗುವಂತೆ ಮಾಡುವುದು ದೇಶದ ಸಮಗ್ರ ಅಭಿವೃದ್ಧಿಯತ್ತ ಗಮನ ನಿದುವುದು ಸೇರಿದಂತೆ ಹಲವು ಅಂಶಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.
ಭೂಪಾಲ್ ಸಮೀಪ ಶಾರದಾ ವಿಹಾರ ಪ್ರದೇಶದ ಶಿಶು ಮಂದಿರ ಸ್ಕೂಲ್ನಲ್ಲಿ ಇಂದಿನಿಂದ ಮೂರು ದಿನಗಳ ತನಕ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳ(ಎಬಿಕೆಎಂ)ದ ವತಿಯಿಂದ ವಾರ್ಷಿಕ 'ದೀಪಾವಳಿ ಬೈಠಕ್' ನಡೆಯಲಿದೆ.