ದೇಶ

'ನಿಮಗೆ ಎಷ್ಟು ಧೈರ್ಯ ಸರ್?': ನಟರ ಐಕ್ಯೂ ಕುರಿತು ಮಾತನಾಡಿದ್ದ ಬಿಜೆಪಿ ವಕ್ತಾರನಿಗೆ ಫರಾನ್ ಅಖ್ತರ್

Manjula VN
ಮುಂಬೈ: ಚಿತ್ರ ನಟರಿಗೆ ಬುದ್ದಿಮತ್ತೆ ಹಾಗೂ ಸಾಮಾನ್ಯ ಜ್ಞಾನ ತೀರಾ ಕಡಿಮೆಯಿರುತ್ತದೆ ಎಂಬ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಹೇಳಿಕೆಗೆ ಬಾಲಿವುಡ್ ನಟ ಫರಾನ್ ಅಖ್ತರ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. 
ಮೆರ್ಸಲ್ ಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರು, ಚಿತ್ರದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ), ಡಿಜಿಟಲ್ ಇಂಡಿಯಾ ಯೋಜನೆಗಳನ್ನು ಟೀಕಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ, ಸಿನಿಮಾ ನಟರಿಗೆ ಬುದ್ದಿಮತ್ತೆ ಹಾಗೂ ಸಾಮಾನ್ಯ ಜ್ಞಾನ ಎರಡೂ ಬಹಳ ಕಡಿಮೆ ಎಂದು ಲೇವಡಿ ಮಾಡಿದ್ದರು. 

ನರಸಿಂಹ ರಾವ್ ಅವರು ಈ ಹೇಳಿಕೆಯನ್ನು ನಟ ಫರಾನ್ ಅಖ್ತರ್ ಅವರು ತೀವ್ರವಾಗಿ ಖಂಡಿಸಿದ್ದಾರೆ, ಹೇಳಿಕೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀರ್ ಮಾಡಿರುವ ಅವರು, ಚಿತ್ರರಂಗದವರ ಬಗ್ಗೆ ಈ ರೀತಿಯ ಮಾತನಾಡುವುದಕ್ಕೆ ನಿಮಗೆಷ್ಟು ಧೈರ್ಯ ಸರ್? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ನಟರ ಬಗ್ಗೆ ಈ ರೀತಿಯ ಅಭಿಪ್ರಾಯ ಹೊಂದಿರುವುದು ನಾಚಿಕೆಗೇಡು ಎಂದು ಟೀಕಿಸಿದ್ದಾರೆ. 

ನಟನ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ನರಸಿಂಹರಾವ್ ಅವರು, ಅಭಿಪ್ರಾಯ ವ್ಯಕ್ತಪಡಿಸುವುದು ಧೈರ್ಯ ಅಲ್ಲ. ಸ್ಟಾರ್ ನಟರ ಬಗ್ಗೆ ನನಗೆ ಗೌರವವಿದೆ. ನನ್ನ ಟೀಕೆಯನ್ನು ರಚನಾತ್ಮಕವಾಗಿ ಸ್ವೀಕರಿಸಿ, ದಯವಿಟ್ಟು ಅಸಹಿಷ್ಣುತೆ ಬೇಡ ಎಂದು ತಿಳಿಸಿದ್ದಾರೆ. 
SCROLL FOR NEXT