ಶ್ರೀನಗರ: ಉಗ್ರರಿಗೆ ಆರ್ಥಿಕೆ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್ ಪುತ್ರ ಸಯ್ಯದ್ ಶಾಹಿದ್ ಯೂಸುಫ್'ನನ್ನು ಎನ್ಐಎ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.
ಉಗ್ರರಿಗೆ ಆರ್ಥಿಕೆ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಸತ್ಯಗಳನ್ನು ಶಾಹಿದ್ ಮುಚ್ಚಿಡುತ್ತಿದ್ದು, ಅ.16ರಂದು ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ದಳ ಈ ಹಿಂದೆ ಶಾಹಿದ್ ಗೆ ಸಮನ್ಸ್ ಜಾರಿ ಮಾಡಿತ್ತು. ಇದೀಗ ಶಾಹಿದ್ ನನ್ನು ಬಂಧನಕ್ಕೊಳಪಡಿಸಿರುವ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರೆಂದು ವರದಿಗಳು ತಿಳಿಸಿವೆ.
ಸಯ್ಯದ್ ಶಾಹಿದ್ ಯೂಸುಫ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್ ಮೂರವೇ ಪುತ್ರನಾಗಿದ್ದು, ಈಗ ಸೊಯ್ಬುಘ್ ಬುದ್ಗಾಂನ ನಿವಾಸಿಯಾಗಿದ್ದಾನೆ. ಕೃಷಿ ಕ್ಷೇತ್ರದಲ್ಲಿ ಪದವಿ ಮಾಡಿರುವ ಶಾಹಿದ್, ಷೇರ್-ಇ-ಕಾಶ್ಮೀರ್ ಇನ್ಸ್ಟಿಟ್ಯೂಫ್ ಆಫ್ ಅಗ್ರಿಕಲ್ಚರಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ರಿಸರ್ಚ್ ಮಾಡುತ್ತಿದ್ದಾನೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸಲು ಪ್ರತ್ಯೇಕತಾವಾದಿಗಳು ಪಾಕಿಸ್ತಾನದಿಂದ ಹಣಕಾರು ನೆರವು ಪಡೆಯುತ್ತಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಉಗ್ರರಿಗೆ ಆರ್ಥಿಕ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲಿ ದೆಹಲಿ ಪೊಲೀಸರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಅಮೆರಿಕಾ ಸಯ್ಯದ್ ಸಲಹುದ್ದೀನ್'ನನ್ನು ಜಾಗತಿಕ ಉಗ್ರನೆಂದು ಘೋಷಣೆ ಮಾಡಿತ್ತು.