ಇಬ್ರಾಹಿಂಪುರ್(ತೆಲಂಗಾಣ): ಕಳೆದ ವರ್ಷ ನೋಟು ಅಮಾನ್ಯೀಕರಣ ಕ್ರಮದ ನಂತರ ನಗದು ವಹಿವಾಟಿಗೆ ಗುಡ್ ಬೈ ಹೇಳಿ ದಕ್ಷಿಣ ಭಾರತದ ಪ್ರಪ್ರಥಮ ಕ್ಯಾಶ್ಲೆಸ್ ಗ್ರಾಮ ಎಂಬ ಖ್ಯಾತಿಗೆ ಭಾಜನವಾಗಿದ್ದ ಇಬ್ರಾಹಿಂಪುರ್ ಗ್ರಾಮ ಇದೀಗ ಮತ್ತೆ ನಗದು ವಹಿವಾಟಿಗೆ ಮರಳಿದೆ.
ತೆಲಂಗಾಣ ರಾಜ್ಯದ ಸಿದ್ದಿಪೇಟ್ ಜಿಲ್ಲೆಯಲ್ಲಿರುವ ಇಬ್ರಾಹಿಂಪುರ್ ಪುಟ್ಟ ಗ್ರಾಮದಲ್ಲಿ 1,200 ಮಂದಿ ವಾಸವಾಗಿದ್ದಾರೆ. ನೋಟು ಅಮಾನ್ಯೀಕರಣದ ನಂತರ ಈ ಗ್ರಾಮದ ಜನರು ಆಟೋ ದರ ಪಾವತಿಸಲು ಹಾಗೂ ತಿಂದಿ ಖರೀದಿಸಲೂ ನಗದು ಉಪಯೋಗಿಸುತ್ತಿರಲಿಲ್ಲ. ಗ್ರಾಮದ ಎಲ್ಲಾ ಅಂಗಡಿ ಮಾಲೀಕರ ಬಳಿಯೂ ಬ್ಯಾಂಕ್ ಒದಗಿಸಿದ ಸ್ಪೈಪ್ ಮಶೀನುಗಳು ಇದ್ದವು. ಆದರೆ ಬ್ಯಾಂಕ್ ಗಳು ಸ್ಪೈಪ್ ಮಶೀನ್ ಮೇಲೆ ವಿಧಿಸುವ ಮಾಸಿಕ ಬಾಡಿಗೆ 1400 ರುಪಾಯಿ ಆಗಿದ್ದು ಈ ಮೊತ್ತ ಗ್ರಾಮದ ಸಣ್ಣ ಪುಟ್ಟ ಉದ್ಯಮಿಗಳಿಗೆ ತೀರಾ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪೈಪ್ ಮಶೀನ್ ಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸುತ್ತಿದ್ದಾರೆ.
2017ರ ಫೆಬ್ರವರಿ ತಿಂಗಳವರೆಗೂ ಸ್ಪೈಪ್ ಮಶೀನ್ ಗಳ ಮೇಲೆ ಯಾವುದೇ ಬಾಡಿಗೆ ಇರಲಿಲ್ಲ. ಬಳಿಕ ಮಾರ್ಚ್ ತಿಂಗಳಿಂದ ಸ್ಪೈಪ್ ಮಶೀನ್ ಹೊಂದಿರುವವರಿಗೆ ಯಾವುದೇ ಮಾಹಿತಿ ನೀಡದೇ ಬ್ಯಾಂಕ್ ನವರು 1,400 ರುಪಾಯಿ ಬಾಡಿಗೆ ವಸೂಲಿ ಮಾಡುತ್ತಿದ್ದು ಈ ಹಿನ್ನಲೆಯಲ್ಲಿ ರಾಜಯ್ಯ ಎಂಬುವರು ಸ್ಪೈಪ್ ಮಶೀನ್ ಹಿಂದಿರುಗಿಸಲು ತೀರ್ಮಾನಿಸಿದರು. ನಂತರ 9 ಮಂದಿ ಸಹ ರಾಜಯ್ಯ ಅವರನ್ನೇ ಅನುಸರಿಸಿದರು.
ಭ್ರಷ್ಟಾಚಾರದ ವಿರುದ್ಧದ ಸಮರದಲ್ಲಿ ಭಾಗಿಯಾಗಲು ಹಾಗೂ ನಗದು ಕೊರತೆಯಿದ್ದ ಸಂದರ್ಭ ಕ್ಯಾಶ್ ಲೆಸ್ ಆರ್ಥಿಕತೆಗೆ ಒಪ್ಪಿ ಡಿಜಿಟೆಲ್ ಗೆ ವ್ಯವಸ್ಥೆಗೆ ಬದಲಾಗಿದ್ದವು. ಆದರೆ ಇದು ತಪ್ಪು ನಿರ್ಧಾರ ಎಂದು ಈಗ ಅನಿಸುತ್ತಿದೆ ಇನ್ನು ಕ್ಯಾಶ್ ಲೆಸ್ ವ್ಯವಹಾರಗಳನ್ನು ಕಡ್ಡಾಯಗೊಳಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಗ್ರಾಮಸ್ಥರು ಕ್ಯಾಶ್ ಲೆಸ್ ನಿಂದ ನಗದು ವಹಿವಾಟಿಗೆ ಮರಳುತ್ತಿರುವುದನ್ನು ಕಂಡ ಸ್ಥಳೀಯ ಶಾಸಕ ಹಾಗೂ ನೀರಾವರಿ ಸಚಿವ ಟಿ ಹರೀಶ್ ರಾವ್ ಅವರು ತಾವು ಬ್ಯಾಂಕುಗಳಿಗೆ ಸ್ಪೈಪ್ ಮಶೀನುಗಳ ಬಾಡಿಗೆ ದರವನ್ನು ರದ್ದುಗೊಳಿಸುವಂತೆ ಕೋರಿರುವುದಾಗಿ ಹೇಳುತ್ತಾರೆ.