ಹುತಾತ್ಮ ಯೋಧನ ಪತ್ನಿಯ ಕಾಲು ಮುಟ್ಟಿ ನಮಸ್ಕರಿಸಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಧಾಮ್ಪುರ್: ಪರಮ ವೀರ ಚಕ್ರ ಪದಕ ಗೌರವಕ್ಕೆ ಪಾತ್ರರಾಗಿರುವ ಹುತಾತ್ಮ ಯೋಧ ಅಬ್ದುಲ್ ಹಮೀರ್ ಅವರ ಪತ್ನಿಯ ಕಾಲು ಮುಟ್ಟಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ನಮಸ್ಕರಿಸಿದ್ದು, ಈ ಮೂಲಕ ರಾವತ್ ಅವರು ತಮ್ಮ ಸಹೋದ್ಯೋಗಿಗಳಿಗೆ ಅಪಾರ ಗೌರವ ನೀಡುತ್ತಾರೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಧಾಂಪುರ್ ದಲ್ಲಿ ನಿನ್ನೆ ನಡೆದ ಹುತಾತ್ಮ ಯೋಧರ 52ನೇ ವಾರ್ಷಿಕೋತ್ಸವ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಅವರು ಥಾಮ್ಪುರಕ್ಕೆ ಭೇಟಿ ನೀಡಿದ್ದರು. ಈ ವೇಳೆ 80 ವರ್ಷದ ವೃದ್ಧೆ ಹಾಗೂ ಹುತಾತ್ಮ ಯೋಧನ ಪತ್ನಿಯ ಕಾಲು ಮುಟ್ಟಿ ನಮಸ್ಕರಿಸಿ ರಾವತ್ ಅವರು, ಆಶೀರ್ವಾದವನ್ನು ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಪರಮ ವೀರ ಚಕ್ರ ಪದಕ ಗೌರವಕ್ಕೆ ಪಾತ್ರರಾಗಿರುವ ಅಬ್ದುಲ್ ಹಮೀದ್ ಅವರ ಪತ್ನಿ 80 ವರ್ಷದ ರಸೂಲನ್ ಬೀಬಿ ಅವರು, ಸಮಾರಂಭದ ವೇದಿಕೆ ಮೇಲೆ ರಾವತ್ ಅವರ ಪಕ್ಕದಲ್ಲಿ ಕುಳಿತುಕೊಂಡಿದ್ದರು. ಹುತಾತ್ಮ ಯೋಧನ ಪತ್ನಿಗೆ ಪದಕ ನೀಡುವ ಸಂರ್ಭದಲ್ಲಿ ರಾವತ್ ಅವರು ಭಾವುಕರಾಗಿದ್ದಾರೆ. ಬಳಿಕ ರಸೂಲನ್ ಬೀಬಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮತ್ತಿತರೆ ಹುತಾತ್ಮ ಯೋಧರ ಪತ್ನಿಯಲು ಚಪ್ಪಾಳೆ ಹೊಡೆಯುವ ಮೂಲಕ ಸೇನಾ ಮುಖ್ಯಸ್ಥರ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೇನಾ ಮುಖ್ಯಸ್ಥರು ಇಲ್ಲಿಗೆ ಬಂದಿದ್ದು, ಬಹಳ ಸಂತಸವನ್ನು ತಂದಿದೆ. ರಾವತ್ ಅವರು ನನ್ನ ಕಾಲನ್ನು ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡರು ಎಂದು ಹುತಾತ್ಮ ಯೋಧನ ಪತ್ನಿ ಹೇಳಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿರುವ ರಾವತ್ ಅವರು, 1965 ರ ಭಾರತ-ಪಾಕಿಸ್ತಾನದ ಯುದ್ಧದಲ್ಲಿ ಹಮೀದ್ ಅವರ ಶೌರ್ಯವನ್ನು ಮೆಚ್ಚಬೇಕು. ಯುದ್ಧ ಸಂದರ್ಭದಲ್ಲಿ ಖೇಮ್ಕರನ್ ಪ್ರದೇಶದಲ್ಲಿ ಶತ್ರುಗಳ ಹಲವಾರು ಟ್ಯಾಂಕರ್ ಗಳನ್ನು ಹಮೀದ್ ಅವರು ನಾಶ ಮಾಡಿದ್ದರು. ಅವರ ದಿಟ್ಟ ಹೋರಾಟ ಮತ್ತು ಶೌರ್ಯ ಹಾಗೂ ದೇಶಕ್ಕಾಗಿದ್ದ ಅವರ ತ್ಯಾಗ ಬಲಿದಾನ ಯುವಕರಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos