ನವದೆಹಲಿ: ಕುಲ್'ಭೂಷಣ್ ಜಾಧವ್ ನನ್ನು ಮುಂದಿಟ್ಟುಕೊಂಡು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ತಡೆಯಲು ಯತ್ನಿಸುತ್ತಿದೆ ಎಂದು ಪಾಕಿಸ್ತಾನ ಮಂಗಳವಾರ ಆರೋಪಿಸಿದೆ.
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್ ಪ್ರಕರಣ ಕುರಿತಂತೆ ಇಂದು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಆಂತರಿಕ ಸಚಿವ ಅಹ್ಸಾನ್ ಇಕ್ಬಾಲ್ ಅವರು, ಭಯೋತ್ಪಾದನೆ ಮೂಲಕ ಭಾರತ ಸಿಪಿಇಸಿಯನ್ನು ನಾಶ ಮಾಡುತ್ತಿದೆ ಎಂಬುದಕ್ಕೆ ಕುಲ್ ಭೂಷಣ್ ಜಾಧವ್ ಪ್ರಕರವೊಂದು ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಜಾಧವ್ ಪ್ರಕರಣವನ್ನು ಪಾಕಿಸ್ತಾನ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸುತ್ತೇವೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಈ ಯತ್ನದಲ್ಲಿ ಪಾಕಿಸ್ತಾನ ಯಶಸ್ಸು ಕಾಣಲಿದೆ. ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವಿನ ಅಭೂತಪೂರ್ವ ಸ್ನೇಹದ ಫಲವಾಗಿ ಸಿಪಿಇಸಿ ರೂಪುಗೊಂಡಿದೆ ಎಂದು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್'ಭೂಷಣ್ ಜಾಧವ್'ಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ಕಳೆದ ಏಪ್ರಿಲ್ ತಿಂಗಳಿನಲ್ಲಿ ಮರಣ ದಂಡನೆ ವಿಧಿಸಿತ್ತು. ಅವರ ವಿರುದ್ಧದ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪಗಳು ನ್ಯಾಯಾಲಯದ ರಹಸ್ಯ ವಿಚಾರಣೆಯಲ್ಲಿ ಸಾಬೀತಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.