ನವದೆಹಲಿ: ಮಯನ್ಮಾರ್ ನಿಂದ ಹೊರನಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಬಾಂಗ್ಲಾಗೆ ಪ್ರವೇಶಿಸಿದ್ದು, ನಿರಾಶ್ರಿತರನ್ನು ನಿರ್ವಹಿಸುತ್ತಿರುವ ಬಾಂಗ್ಲಾದೇಶಕ್ಕೆ ಭಾರತ ನೆರವಿನ ಹಸ್ತ ನೀಡಿದೆ.
ಬಾಂಗ್ಲಾದಲ್ಲಿರುವ ರೋಹಿಂಗ್ಯಾ ನಿರಾಶ್ರಿತರಿಗೆ ಭಾರತ ಪರಿಹಾರ ಸಾಮಗ್ರಿಗಳನ್ನು ಕಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಪರಿಹಾರ ಸಾಮಗ್ರಿಗಳ ಮೊದಲ ಟ್ರಕ್ ಸೆ.14 ರಂದು ಚಿತ್ತಗಾಂಗ್ ನ್ನು ತಲುಪಲಿದೆ.
ಅಕ್ಕಿ, ಬೇಳೆ ಕಾಳುಗಳು, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ, ಚಹಾ, ನೂಡಲ್ಸ್, ಬಿಸ್ಕೇಟ್, ಸೊಳ್ಳೆ ಪರದೆಗಳು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಭಾರತ ಬಾಂಗ್ಲಾದೇಶಕ್ಕೆ ಕಳಿಸಿಕೊಡುತ್ತಿದೆ. ಭಾರತ-ಬಾಂಗ್ಲಾ ನಡುವಿನ ಸ್ನೇಹವನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶಕ್ಕೆ ನೆರವು ನೀಡುವ ವಿಚಾರದಲ್ಲಿ ಭಾರತ ಎಂದಿಗೂ ತಕ್ಷಣವೇ ಕ್ರಮಗಳನ್ನು ಕೈಗೊಂಡಿದೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ ಆ.25 ರಿಂದ ಈ ವರೆಗೆ 379,000 ರೋಹಿಂಗ್ಯ ಮುಸ್ಲಿಮರು ಮಯನ್ಮಾರ್ ನಿಂದ ಬಾಂಗ್ಲಾಗೆ ವಲಸೆ ಹೋಗಿದ್ದಾರೆ.