ದೇಶ

ಪ್ರಧಾನಿಯಿಂದ ಸರ್ದಾರ್ ಸರೋವರ ಅಣೆಕಟ್ಟು ಲೋಕಾರ್ಪಣೆ: ಮಧ್ಯ ಪ್ರದೇಶದಲ್ಲಿ ಜನರಿಂದ ಪ್ರತಿಭಟನೆ

Sumana Upadhyaya
ಭೋಪಾಲ್: ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣದಿಂದ ನೆಲೆ ಕಳೆದುಕೊಂಡ ಕುಟುಂಬಗಳಿಗೆ ಪುನರ್ವಸತಿ ಕೋರಿ ಮಧ್ಯ ಪ್ರದೇಶ ಹಲವು ಭಾಗಗಳಲ್ಲಿ ನಿನ್ನೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸರ್ದಾರ್ ಸರೋವರ್ ಅಣೆಕಟ್ಟನ್ನು ನಿನ್ನೆ ಪ್ರಧಾನ ಮಂತ್ರಿ ಲೋಕಾರ್ಪಣೆಗೊಳಿಸಿದ್ದರು.
ಮಧ್ಯ ಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ನರ್ಮದಾ ನದಿ ನೀರಿನಲ್ಲಿ ಕಳೆದ ಮೂರು ದಿನಗಳಿಂದ ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಸೊಂಟದವರೆಗೆ ನೀರಿನಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣದಿಂದ ನೆಲೆ ಕಳೆದುಕೊಂಡ ಸುಮಾರು 40,000 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕೆಂದು ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದಾರೆ. ಅವರು ನಿನ್ನೆ ಸಾಯಂಕಾಲ ತಮ್ಮ ಮೂರು ದಿನಗಳ ಜಲಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
ನಾನು ನ್ನ ಪ್ರತಿಭಟನೆಯನ್ನು ರದ್ದುಗೊಳಿಸಿದ್ದೇನೆ ಎಂದು ಮೇಧಾ ಪಾಟ್ಕರ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸರ್ದಾರ್ ಸರೋವರ ಅಣೆಕಟ್ಟನ್ನು ವಿರೋಧಿಸಿ ಬೇರೆ ರಾಜ್ಯದ ಜನರು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಹೋರಾಟದಿಂದಾಗಿ ಮಧ್ಯ ಪ್ರದೇಶ, ರಾಜಸ್ತಾನ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿದರು.
ಅಣೆಕಟ್ಟನ್ನು ಪ್ರಧಾನಿಗಳು ಲೋಕಾರ್ಪಣೆಗೊಳಿಸಿದ ಗಂಟೆಗಳ ನಂತರ ಸಿಪಿಎಂ ನಾಯಕ ಸುಭಾಶಿನಿ ಆಲಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಿಪಿಎಂ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಅಂತಹದ್ದೇ ಪ್ರತಿಭಟನೆ ನಡೆಸಿ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳಿ ಎಂದು ಹೇಳಿತು.
ಖಾರ್ಗೊನ್ ಜಿಲ್ಲೆಯ ನವದತೌದಿ ಗ್ರಾಮದಲ್ಲಿ ಕೆಲವರು ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನರ್ಮದಾ ನದಿಯಲ್ಲಿ ನಿಂತು ಜಲಸತ್ಯಾಗ್ರಹ ಮಾಡಿ ಪ್ರತಿಭಟನೆ ನಡೆಸಲಾಯಿತು ಎಂದು ಸ್ಥಳೀಯ ಮೀನುಗಾರರ ಸಮುದಾಯ ಕೇವತ್ ಸಮಜ್ ಸದಸ್ಯ ನಾಗೇಶ್ ಕೇವತ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಅಣೆಕಟ್ಟು ನಿರ್ಮಾಣದಿಂದ ನೆಲೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಜುಲೈ 27ರಿಂದ ಆಗಸ್ಟ್ 12ರವರೆಗೆ ಧಾರ್ ಜಿಲ್ಲೆಯಲ್ಲಿ ಮೇದಾ ಪಾಟ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಇನ್ನೊಂದೆಡೆ, ನರ್ಮದಾ ಕಣಿವೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೇಳುವ ಪ್ರಕಾರ, ಅಣೆಕಟ್ಟು ನಿರ್ಮಾಣದಿಂದ ರಾಜ್ಯದ ನಾಲ್ಕು ಜಿಲ್ಲೆಗಳ 23,164 ಕುಟುಂಬಗಳ ಮೇಲೆ ಪರಿಣಾಮ ಬೀರಿದೆ. 
ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣ 56 ವರ್ಷಗಳ ಹಿಂದೆ ಆರಂಭಗೊಂಡಿತ್ತು. ಆರಂಭದಿಂದಲೂ ಪ್ರತಿಭಟನೆ, ವಿರೋಧ ಕೇಳಿಬರುತ್ತಿತ್ತು.
SCROLL FOR NEXT