ನವದೆಹಲಿ: ಅತ್ತ ಮಯನ್ಮಾರ್ ನಲ್ಲಿ ರೊಹಿಂಗ್ಯಾ ಮುಸ್ಲಿಮರು ದೇಶದಿಂದ ಪಲಾಯನ ಮಾಡುತ್ತಿರುವಂತೆಯೇ ಇತ್ತ ರೊಹಿಂಗ್ಯಾ ಮುಸ್ಲಿಮ್ ಯುವಕರೊಂದಿಗೆ ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರ ಸಂಘಟನೆಗಳಾದ ಲಷ್ಕರ್ ಇ ತೊಯ್ಬಾ ಮತ್ತು ಅಲ್ ಖೈದಾ ಉಗ್ರ ಸಂಘಟನೆಗಳು ಸಂಪರ್ಕ ಹೊಂದಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ಸ್ವತಃ ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ ಎಂದು ಹೇಳಲಾಗುತ್ತಿದ್ದು, ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ತನ್ನ ಅಫಿಡವಿಟ್ ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದೆ ಎಂದು ಹೇಳಲಾಗತ್ತಿದೆ. ಮಾಧ್ಯಮವೊಂದು ವರದಿ ಮಾಡಿರುವಂತೆ ಕೇಂದ್ರ ಸರ್ಕಾರ ಸಲ್ಲಿಕೆ ಮಾಡಿರುವ ಅಫಿಡವಿಟ್ ನಲ್ಲಿ ರೊಹಿಂಗ್ಯಾ ಮುಸ್ಲಿಮರು ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಗಂಭೀರ ಬೆದರಿಕೆಯಾಗುವ ಸಾಧ್ಯತೆ ಇದೆ. ರೊಹಿಂಗ್ಯಾ ಮುಸ್ಲಿಮರ ಪೈಕಿ ಹಲವು ಯುವಕರು ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರ ಸಂಘಟನೆಗಳಾದ ಲಷ್ಕರ್ ಇ ತೊಯ್ಬಾ, ಅಖಮುಲ್ ಮುಂಜಾಹಿದ್ದೀನ್ ಮತ್ತು ಅಲ್ ಖೈದಾ ದಂತಹ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದೆ ಎಂದು ವರದಿಯಾಗಿದೆ.
ಪ್ರಮುಖವಾಗಿ ಅಖಮುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ನೇರವಾಗಿ ರೊಹಿಂಗ್ಯ ಮುಸ್ಲಿಮರೊಂದಿಗೆ ಸಂಪರ್ಕ ಹೊಂದಿದ್ದು, ಮಯನ್ಮಾರ್ ಗಡಿಯಲ್ಲಿ ನಡೆದ ಉಗ್ರದಾಳಿಯಲ್ಲಿ ಇದೇ ಅಖಮುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಉಗ್ರರಿಗೆ ನೇರ ನೆರವು ನೀಡಿತ್ತು. ಅಲ್ಲದೆ ಪಾಕಿಸ್ತಾನದ ಜೈಷ್ ಇ ಮೊಹಮದ್ ನೊಂದಿಗೂ ಈ ಎಎಂಎಂ ಉಗ್ರ ಸಂಘಟನೆ ಸಂಪರ್ಕ ಹೊಂದಿದೆ. ಅಂತೆಯೇ ರೊಹಿಂಗ್ಯಾ ಮೂಲದವನಾದ ಪಾಕಿಸ್ತಾನಿ ಪ್ರಜೆ ಅಬ್ದುಸ್ ಖದೂಸ್ ಬರ್ಮಿ ನೇತೃತ್ವದ ಹರ್ಕತ್ ಉಲ್ ಜಿಹಾದ್ ಇಸ್ಲಾಮಿ ಅರಾಕನ್ ಸಂಘಟನೆಯೊಂದಿಗೂ ಎಎಂಎಂ ಸಂಪರ್ಕಹೊಂದಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ಕೇಂದ್ರ ಸರ್ಕಾರ ತನ್ನ ಅಫಿಡವಿಟ್ ನಲ್ಲಿ ಹೇಳಿದೆ ಎಂದು ಹೇಳಲಾಗಿದೆ.
ಇತ್ತ ಮತ್ತೊಂದು ವರದಿಯಲ್ಲಿ ಪ್ರಸ್ತುತ ಹಿಂಸಾಚಾರಕ್ಕೀಡಾಗಿರುವ ಬಾಂಗ್ಲಾದೇಶ-ಮಯನ್ಮಾರ್ ಗಡಿಯಲ್ಲಿರುವ ರಖೈನ್ ನಗರದ ಕಾಕ್ಸ್ ಬಜಾರ್ ನಲ್ಲಿರುವ ರೊಹಿಂಗ್ಯಾ ನಿರಾಶ್ರಿತ ಶಿಬಿರದಲ್ಲಿ ಎಎಂಎಂ ಉಗ್ರ ಸಂಘಟನೆ ತನ್ನ ಕಮಾಂಡರ್ ಗಳನ್ನು ನೇಮಕ ಮಾಡಿಕೊಂಡಿದ್ದು, ಅವರಿಗೆ ಬಾಂಗ್ಲಾದೇಶ-ಮಯನ್ಮಾರ್ ಗಡಿಯಲ್ಲಿ ತರಬೇತಿ ನೀಡುತ್ತಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos