ತಿರುವನಂತಪುರಂ: ಕಳೆದ ಜುಲೈ ತಿಂಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಇಸ್ಲಾಮ್ ಧರ್ಮಕ್ಕೆ ಮತಾಂತಗೊಳ್ಳುತ್ತಿರುವುದಾಗಿ ಘೋಷಿಸಿದ್ದ 23 ವರ್ಷದ ಹಿಂದೂ ಮಹಿಳೆ ಅಥಿರಾ, ಕಳೆದ ಗುರುವಾರ ಮತ್ತೊಂದು ಪತ್ರಿಕಾಗೋಷ್ಠಿ ನಡೆಸಿ 'ಓಂ ನಮಃ ಶಿವಾಯ' ಎಂದು ಹೇಳಿದ್ದಾರೆ.
ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಅಥಿರಾ, ನನ್ನ ನಂಬಿಕೆಯನ್ನು ಬದಲಾಯಿಸುವುದಕ್ಕಾಗಿ ತನ್ನ ಮುಸ್ಲಿಂ ಸ್ನೇಹಿತೆಯರು ತನಗೆ ತಪ್ಪು ಮಾಹಿತಿ ನೀಡಿದರು ಎಂದು ಆರೋಪಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಮೊದಲಿನಿಂದಲೂ ನನ್ನ ಮನಸಿನಲ್ಲಿ ಗೊಂದಲ ಇತ್ತು. ಅದನ್ನು ದುರ್ಬಳಕೆ ಮಾಡಿಕೊಂಡ ನನ್ನ ಮುಸ್ಲಿಂ ಸ್ನೇಹಿತರು, ಕಲ್ಲನ್ನು ಪೂಜಿಸುವುದು ಮುರ್ಖತನ. ಹಿಂದೂ ಧರ್ಮದಲ್ಲಿ ಹಲವು ದೇವರಿದ್ದಾರೆ. ಆದರೆ ಇಸ್ಲಾಮ್ ಧರ್ಮದಲ್ಲಿ ದೇವರು ಒಬ್ಬನೇ ಅವನೇ ಎಲ್ಲಾ ಎಂದು ಹೇಳಿ ಮನಃ ಪರಿವರ್ತನೆ ಮಾಡಿದ್ದರು ಎಂದು ದೂರಿದ್ದಾರೆ.
ನನ್ನ ಕೆಲ ಸ್ನೇಹಿತರು ಇಸ್ಲಾಮ್ ಧರ್ಮದ ಬಗ್ಗೆ ತಿಳಿದುಕೊಳ್ಳಲು ಕೆಲವು ಪುಸ್ತಕಳನ್ನು ನೀಡಿದ್ದರು ಮತ್ತು ಜಾಕೀರ್ ನಾಯಕ್ ಬಗ್ಗೆ ಭಾಷಣದ ವಿಡಿಯೋಗಳನ್ನು ನೋಡುವಂತೆ ಹೇಳಿದ್ದರು ಎಂದಿದ್ದಾರೆ.
ಜುಲೈ ಮೊದಲ ವಾರದಲ್ಲಿ ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಳ್ಳುವ ಮುನ್ನ ತನ್ನ ಪೋಷಕರಿಗೆ 15 ಪುಟಗಳ ಪತ್ರ ಬರೆದಿದ್ದ ಅಥಿರಾ, ನಾನು ಇಸ್ಲಾಮ್ ಧರ್ಮದ ಬಗ್ಗೆ ಅಧ್ಯಯನ ಮಾಡಲು ತೆರಳುತ್ತಿರುವುದಾಗಿ ಹೇಳಿದ್ದಳು. ಅಲ್ಲದೆ ತನ್ನ ಹೆಸರನ್ನು ಅಯೇಶಾ ಎಂದು ಬದಲಾಯಿಸಿಕೊಂಡಿದ್ದಳು.