ನವದೆಹಲಿ: ಇನ್ನೊಂದು ಆಘಾತಕಾರಿ ಘಟನೆಯಲ್ಲಿ ಹಿರಿಯ ಪತ್ರಕರ್ತ ಕೆಜೆ ಸಿಂಗ್ ಮತ್ತು ಅವರ 92 ವರ್ಷದ ವೃದ್ಧೆ ತಾಯಿಯ ಮೃತದೇಹ ದೆಹಲಿಯ ಮೊಹಾಲಿ ನಿವಾಸದಲ್ಲಿ ಇಂದು ಸಿಕ್ಕಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿ ಪ್ರಕಾರ ಇಬ್ಬರನ್ನೂ ಹತ್ಯೆಗೈಯಲಾಗಿದೆ ಎಂದು ಶಂಕಿಸಲಾಗಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಶಿರೊಮಣಿ ಅಕಾಲಿ ದಳ ಅಧ್ಯಕ್ಷ ಸುಖ್ ಬೀರ್ ಸಿಂಗ್ ಬಾದಲ್, ಹಿರಿಯ ಪತ್ರಕರ್ತ ಕೆ,ಜೆ.ಸಿಂಗ್ ಅವರ ತಾಯಿ ಜೊತೆ ಕೊಲೆಯಾಗಿದ್ದಾರೆ ಎಂದು ಈಗ ತಾನೆ ಸುದ್ದಿ ಕೇಳಿದೆ. ಈ ಕೊಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಆರೋಪಿಗಳನ್ನು ಕೂಡಲೇ ಪತ್ತೆಹಚ್ಚಿ ಶಿಕ್ಷಿಸುವಂತೆ ಬಾದಲ್ ಒತ್ತಾಯಿಸಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ದಿನ್ ರಾತ್ ಸುದ್ದಿ ಚಾನೆಲ್ ನ ಪತ್ರಕರ್ತ ಸಂತನು ಭೌಮಿಕ್ ಎಂಬವರನ್ನು ಪ್ರತಿಭಟನಾ ರ್ಯಾಲಿಯ ನೇರ ಪ್ರಸಾರ ಮಾಡುತ್ತಿರುವಾಗ ಪಶ್ಚಿಮ ತ್ರಿಪುರಾ ಜಿಲ್ಲೆಯಲ್ಲಿ ಹತ್ಯೆಗೈಯಲಾಗಿತ್ತು.
ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿತ್ತು.