ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಶಬ್ಬೀರ್ ಶಾ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಶನಿವಾರ ಚಾರ್ಜ್ ಶೀಟ್ ಸಲ್ಲಿಸಿದ್ದು, ಮುಂಬೈ ದಾಳಿಯ ರೂವಾರಿ, ಜಮಾತ್ ಉದ್ ದಾವಾ(ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಜತೆಗೆ ಶಬ್ಬೀರ್ ಶಾ ಸಂಪರ್ಕ ಹೊಂದಿರುವುದಾಗಿ ಆರೋಪಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಚಾರ್ಜ್ ಶೀಟ್ ಪ್ರಕಾರ ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಶಬ್ಬೀರ್ ಶಾ, ಕಳೆದ ಜನವರಿಯಲ್ಲಿ ಉಗ್ರ ಹಫೀಜ್ ಸಯೀದ್ ಕರೆ ಮಾಡಿ, ಕಾಶ್ಮೀರ ವಿಷಯವನ್ನು ಚರ್ಚಿಸುತ್ತಿದ್ದಾನೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶಬ್ಬೀರ್ ಶಾ ಕಾಶ್ಮೀರ ಮತ್ತು ಭಾರತದ ಇತರ ಭಾಗಗಳಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಪಾಕಿಸ್ತಾನದ ಉಗ್ರ ಸಂಘಟನೆಯಿಂದ ಹಣ ಪಡೆದುಕೊಂಡಿದ್ದಾನೆ. ಉಗ್ರ ನಿಧಿಗೆ ಹವಾಲಾ ಮೂಲಕ ಹಣವನ್ನು ಪಡೆದುಕೊಳ್ಳುವಲ್ಲಿ ಶಬ್ಬೀರ್ ಪತ್ನಿ ಡಾ. ಬಿಲ್ಕಿಸ್ ಕೂಡ ಶಾಮೀಲಾಗಿದ್ದಾಳೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಈಗ ನ್ಯಾಯಾಂಗ ಬಂಧನದಲ್ಲಿರುವ ಮೊಹಮ್ಮದ್ ಅಸ್ಲಾಂ ವಾನಿ, ತಾನು ದೆಹಲಿಯಲ್ಲಿ ಶಬ್ಬೀರ್ ಶಾ ಪರವಾಗಿ ಹವಾಲಾ ಹಣವನ್ನು ಉಗ್ರ ನಿಧಿಗಾಗಿ ಪಡೆದುಕೊಳ್ಳುತ್ತಿದ್ದ. ಅದನ್ನು ತನಗೆ ಪಾಕ್ ಹವಾಲಾ ನಿರ್ವಾಹಕ ಶಫಿ ಶಹರ್ಯಾರ್ ಪೂರೈಸುತ್ತಿದ್ದ ಎಂದು ತನಿಖಾಧಿಕಾರಿಗಳ ಬಳಿ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.