ದೇಶ

ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕನನ್ನು ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ: ಉ.ಪ್ರದೇಶ ಪೊಲೀಸರು

Manjula VN
ಲಖನೌ: ಉನ್ನಾವೋ ಅತ್ಯಾಚಾರ ಪ್ರಕರಣ ಸಂಬಂಧ ಕೇಳಿ ಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಉತ್ತರಪ್ರದೇಶ ಪೊಲೀಸರು ನಾವು ಯಾರನ್ನು ರಕ್ಷಿಸಲು ಹಾಗೂ ಸಮರ್ಥಿಸಿಕೊಳ್ಳಲು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಗುರುವಾರ ಹೇಳಿದ್ದಾರೆ. 
ಪ್ರಕರಣ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಪೊಲೀಸ್ ಅಧಿಕಾರಿಗಳು, ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರನ್ನು ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ. ಯಾರನ್ನು ರಕ್ಷಿಸಲು ನಾವು ಯತ್ನ ನಡೆಸುತ್ತಿಲ್ಲ. ಇಬ್ಬರ ಕಡೆಯಿಂದಲೂ ವರದಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. 
ಉತ್ತರಪ್ರದೇಶ ರಾಜ್ಯದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್ ಮತ್ತು ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಮುಕ್ತ ಹಾಗೂ ನ್ಯಾಯಯುತ ತನಿಖೆ ನಡೆಸಲಾಗುತ್ತಿದ್ದು, ಇಬ್ಬರ ಕಡೆಯಿಂದರಲೂ ಸಾಕ್ಷ್ಯಾಧಾರಗಳು, ವರದಿಗಳನ್ನು ಸಂಗ್ರಹಿಸಿ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 
ಕುಲ್ದೀಪ್ ಸಿಂಗ್ ಸೆಂಗಾರ್ ಅವರನ್ನು ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ. ತನಿಖೆ ಸಂದರ್ಭದಲ್ಲಿ ಇಬ್ಬರ ಕಡೆಯಿಂದಲೂ ಮಾಹಿತಿ ಕಲೆಹಾಕಬೇಕಾಗುತ್ತದೆ ಎಂದು ಡಿಜಿಪಿ ಸಿಂಗ್ ಅವರು ತಿಳಿಸಿದ್ದಾರೆ. 
ಅರವಿಂದ್ ಕುಮಾರ್ ಅವರು ಮಾತನಾಡಿ, ಪ್ರಕರಣವನ್ನು ಈಗಾಗಲೇ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ವಹಿಸಲಾಗಿದೆ ಎಂದಿದ್ದಾರೆ. 
ಕುಲ್ದೀಪ್ ಸಿಂಗ್, ಅವರ ಸೋದರ ಹಾಗೂ ಶಾಸಕರ ಕೆಲವು ಸಹಚರರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಅತ್ಯಾಚಾರ ಸಂತ್ರಸ್ತ ಯುವತಿಯು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ನಡುವೆ ಶಾಸಕರ ಕಡೆಯವರು ಪ್ರಕರಣ ಮುಂದುವರಿಸದಂತೆ ಯುವತಿಯ ತಂದೆಗೆ ಥಳಿಸಿದ್ದಾರೆಂದು ಹೇಳಲಾಗುತ್ತಿತ್ತು. ಯುವತಿಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಮರುದಿನವೇ ಆತ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ಪ್ರಕರಣ ಸಂಬಂಧ ಶಾಸಕನ ಸಹೋದರನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. 
SCROLL FOR NEXT