ಕಥುವಾ, ಉನ್ನಾವೋ ಅತ್ಯಾಚಾರ ಪ್ರಕರಣ ಖಂಡಿಸಿ ಮಧ್ಯರಾತ್ರಿ ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿದ ಕಾಂಗ್ರೆಸ್
ನವದೆಹಲಿ: ಬೇಟಿ ಬಚಾವೋ ಘೋಷಣಾ ವಾಕ್ಯಕ್ಕೆ ತಕ್ಕಂತೆ ನಡೆಯಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ತಡರಾತ್ರಿ ಹೇಳಿದ್ದಾರೆ.
ಜಮ್ಮುವಿನ ಕಥುವಾದಲ್ಲಿ ನಡೆದಿದ್ದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಹಾಗೂ ಉತ್ತರಪ್ರದೇಶದ ಉನ್ನಾವೋದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ರಾಜಧಾನಿ ದೆಹಲಿಯ ಇಂಡಿಯಾ ಗೇಟ್ ಬಳಿ ತಡರಾತ್ರಿ ರಾಹುಲ್ ಗಾಂಧಿ ಸೇರಿ ಇನ್ನಿತರೆ ನಾಯಕರು ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿದರು.
ಈ ವೇಳೆ ಮಾತನಾಡಿರುವ ರಾಹುಲ್ ಗಾಂಧಿಯವರು, ಮಹಿಳೆಯರು ಇಂದು ಹೊರಗೆ ಹೋಗಲು ಭಯ ಪಡುವಂತಾಗಿದೆ. ಸರ್ಕಾರ ಮಹಿಳೆಯರಿಗೆ ಸೂಕ್ತ ರೀತಿಯ ರಕ್ಷಣೆಯನ್ನು ನೀಡಬೇಕು. ಬೇಟಿ ಬಚಾವೋ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡಬೇಕಿದೆ ಎಂದು ಹೇಳಿದ್ದಾರೆ.
ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗುತ್ತಿದೆ. ಹೀಗಾಗಿ ಮಹಿಳೆಯರು ಇಂದು ಹೊರಗೆ ಬರಲು ಭಯಪಡುವಂತಹ ಪರಿಸ್ಥಿತಿ ಎದುರಾಗಿದೆ. ಮಹಿಳೆಯರು ರಸ್ತೆ ಬರುವಂತೆ ಹಾಗೂ ಭಯವಿಲ್ಲದೆ ಜೀವನ ನಡೆಸುವಂತೆ ಸರ್ಕಾರ ಮಹಿಳೆಯರಿಗೆ ರಕ್ಷಣೆಯನ್ನು ನೀಡಬೇಕು.
ಪ್ರತಿಭಟನೆ ರಾಜಕೀಯವಾಗಿ ಅಲ್ಲ. ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಕೊಲೆಗಳನ್ನು ಖಂಡಿಸಿ ನಾವು ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ. ಹೀಗಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇದು ರಾಷ್ಟ್ರೀಯ ವಿಚಾರವಾಗಿದ್ದು, ರಾಜಕೀಯ ವಿಚಾರವಲ್ಲ. ಮಹಿಳೆಯರ ಕುರಿತ ವಿಚಾರವಾಗಿದೆ. ಸಾಮಾನ್ಯ ಜನರು ಹಾಗೂ ಎಲ್ಲಾ ಪಕ್ಷಗಳ ನಾಯಕರ ಸೇರಿ ಸಾವಿರಾರು ಜನರು ಇಲ್ಲಿ ಸೇರಿದ್ದಾರೆ. ಪ್ರತೀ ಬಾರಿ ದೇಶದ ಹಲವು ಭಾಗಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇದೆ. ಇದರ ವಿರುದ್ದ ಇಂದು ನಾವು ಪ್ರತಿಭಟಿಸುತ್ತಿದ್ದೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos