ದೇಶ

ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಧೀಶ ರಾಜಿನಾಮೆ

Lingaraj Badiger
ಹೈದ್ರಾಬಾದ್: 2007ರ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ಎನ್ ಐಎ ವಿಶೇಷ ಕೋರ್ಟ್ ನ್ಯಾಯಾಧೀಶ ರವೀಂದ್ರ ರೆಡ್ಡಿ ಅವರು ಸೋಮವಾರ ಸಂಜೆ ರಾಜಿನಾಮೆ ನೀಡಿದ್ದಾರೆ.
ರವೀಂದ್ರ ರೆಡ್ಡಿ ಅವರು ಇಂದು ಬೆಳಗಷ್ಟೇ ಸ್ವಾಮಿ ಅಸೀಮಾನಂದ ಸೇರಿದಂತೆ ಬಲಪಂಥೀಯ ಸಂಘಟನೆಗಳಿಗೆ ಸೇರಿದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದರು. ಇದರ ಬೆನ್ನಲ್ಲೇ ಈಗ ರಾಜಿನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸೂಕ್ತ ಸಾಕ್ಷ್ಯಾಧಾರ ಮತ್ತು ಪೂರಕ ದಾಖಲೆಗಳನ್ನು ಒದಗಿಸಿ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾಗಿದೆ ನ್ಯಾಯಮೂರ್ತಿ ರವೀಂದ್ರ ರೆಡ್ಡಿ ಅವರು ಹೇಳಿದ್ದರು.
ಎರಡು ವಾರಗಳ ಹಿಂದಷ್ಟೇ ಎನ್ಐಎ ಅಧಿಕಾರಿ ಪ್ರತಿಭಾ ಅಂಬೇಡ್ಕರ್ ಅವರನ್ನು ತೆಗೆದು ಹಾಕಲಾಗಿತ್ತು.
ಮೂರು ಉಗ್ರ ದಾಳಿ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲಾ ಒಂಬತ್ತು ಆರೋಪಿಗಳು ಅಭಿನವ ಭಾರತ ಸಂಘಟನೆಯ ಸದಸ್ಯರಾಗಿದ್ದು, ದೇವೇಂದ್ರ ಗುಪ್ತಾ, ಲೋಕೇಶ್‌ ಶರ್ಮಾ ಅಲಿಯಾಸ್‌ ಅಜಯ್‌ ತಿವಾರಿ, ಲಕ್ಷ್ಮಣ್‌ ದಾಸ್‌ ಮಹಾರಾಜ್‌, ಮೋಹನ್‌ಲಾಲ್‌ ರಾತೇಶ್ವರ ಮತ್ತು ರಾಜೇಂದ್ರ ಚೌಧರಿ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು.
2007 ಮೇ 18ರಂದು ಹೈದರಾಬಾದ್‌ನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿನ ನಡೆದ ಪೈಪ್‌ ಬಾಂಬ್‌ ಸ್ಫೋಟದಲ್ಲಿ ಎಂಟು ಜನ ಮೃತಪಟ್ಟು, 58 ಜನ ಗಾಯಗೊಂಡಿದ್ದರು.
SCROLL FOR NEXT