ನವದೆಹಲಿ: ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಕೇರಳದಲ್ಲಿ ಭಾರತೀಯ ಸೇನೆ ಮತ್ತು ಎನ್ ಡಿಆರ್ ಎಫ್ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಥ್ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಿಜಕ್ಕೂ ಕೇರಳದಲ್ಲಿ ಪ್ರಕೃತಿ ಮಾತೆ ಮುನಿದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಂತ್ರಸ್ಥರ ನೆರವಿಗೆ ಕಾಂಗ್ರೆಸ್ ಸದಾ ಇದ್ದು, ಕೂಡಲೇ ಕಾರ್ಯಕರ್ತರು ಸಂತ್ರಸ್ಥರ ನೆರವಿಗೆ ಧಾವಿಸಿ. ಅಪಾಯದಲ್ಲಿರುವವರ ರಕ್ಷಿಸಿ, ಅವರಿಗೆ ನೆರವಾಗಿ ಎಂದು ಸೂಚನೆ ನೀಡಿದ್ದಾರೆ.
ಅಲ್ಲದೆ ಪ್ರಸ್ತುತ ರಕ್ಷಣಾ ಕಾರ್ಯಾಚರಣೆಯಲ್ಲಿರುವ ಸೇನೆ ಹಾಗೂ ಎನ್ ಡಿಆರ್ ಎಫ್ ತಂಡಕ್ಕೂ ಸಾಥ್ ನೀಡಿ ಎಂದು ಹೇಳಿದ್ದಾರೆ.
'ಕೇರಳದಲ್ಲಿ ಅನಿರೀಕ್ಷಿತ ಮತ್ತು ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಭೀಕರ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದ್ದು, ನೂರಾರು ಮನೆಗಳು ಕುಸಿಯುವ ಮೂಲಕ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ನಾನು ಈ ಮೂಲಕ ಕಾರ್ಯಕರ್ತರಿಗೆ ಮನವಿ ಮಾಡುವುದೇನೆಂದರೆ ಕೂಡಲೇ ಕೇರಳದ ಪ್ರವಾಹ ಸಂತ್ರಸ್ಥರ ನೆರವಿಗೆ ಧಾವಿಸಿ. ಯಾರಿಗೆ ಅಗತ್ಯವಿದೆಯೋ ಅವರಿದೆ ನೀವು ಸಹಾಯ ಮಾಡಿ. ಪ್ರಜೆಗಳ ಸಂಕಷ್ಟದ ಕಾಲದಲ್ಲಿ ನಾವು ಅವರೊಂದಿಗಿರಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.