ಇಡುಕ್ಕಿ(ಕೇರಳ): ಕೇರಳದಲ್ಲಿ ಎಡಬಿಡದೆ ಸುರಿಯುತ್ತಿರುವ ಮಹಾಮಳೆಯಿಂದಾಗಿ ಜಲಾಶಯಗಳೆಲ್ಲಾ ತುಂಬಿ ಹರಿಯುತ್ತಿದ್ದು ಗ್ರಾಮಗಳೆ ನೀರಿನಿಂದ ಜಲಾವೃತಗೊಂಡಿವೆ.
ತುಂಬಿ ಹರಿಯುತ್ತಿದ್ದ ನೀರಿನ ರಭಸದಲ್ಲಿ ಇನ್ನೇನು ಸೇತುವೆಯೊಂದು ಮುಳಗಡೆಯಾಗಬೇಕಿತ್ತು. ಅಷ್ಟದಲ್ಲಿ ಆಚೆದಡದಲ್ಲಿ ತಂದೆ ಹಾಗೂ ಪುಟ್ಟ ಮಗು ರಕ್ಷಣೆಗಾಗಿ ಕಾದುಕುಳಿತ್ತಿದ್ದರು. ಇದನ್ನು ಗಮನಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್ಡಿಆರ್ಎಫ್)ದ ಅಧಿಕಾರಿ ಕನ್ಹಯ್ಯ ಕುಮಾರ್ ತಮ್ಮ ಜೀವದ ಹಂಗನ್ನು ತೊರೆದು ಸೇತುವೆ ಮೇಲೆ ಓಡಿ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ಓಡಿ ಬಂದಿದ್ದಾರೆ. ಇವರ ಜೊತೆಗೆ ಮಗುವಿನ ತಂದೆ ಸಹ ಧೈರ್ಯವಾಗಿ ಸೇತುವೆ ಮೇಲೆ ಓಡಿ ಬಂದಿದ್ದು ಒಟ್ಟಿನಲ್ಲಿ ಕನ್ಹಯ್ಯ ಕುಮಾರ್ ಅವರ ಕರ್ತವ್ಯಪ್ರಜ್ಞೆಯಿಂದ ತಂದೆ ಮಗಳು ಸುರಕ್ಷಿತವಾಗಿದ್ದಾರೆ.
ಅಪಾಯಕಾರಿ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಮಗುವೊಂದನ್ನು ಕಾಪಾಡಿದ ಕನ್ಹಯ್ಯ ಕುಮಾರ್ ಇದೀಗ ಕೇರಳದಲ್ಲಿ ಹೀರೋ ಆಗಿದ್ದಾರೆ.
ಎನ್ಡಿಆರ್ಎಫ್ ನ ಒಟ್ಟು 14 ತಂಡಗಳ 404 ಸಿಬ್ಬಂದಿ ಕೇರಳ ಇಡುಕ್ಕಿ, ವಯನಾಡ್, ಅಲಪುಜಾ, ಎರ್ನಾಕುಲಂ ಮತ್ತು ತ್ರಿಶೂರ್ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಮಹಾ ಮಳೆ ಮತ್ತು ಭೂಕುಸಿತದಿಂದಾಗಿ ಆಗಸ್ಟ್ 8ರಿಂದ ಈಚೆಗೆ ಕೇರಳದಲ್ಲಿ ಒಟ್ಟು 37 ಮಂದಿ ಮೃತಪಟ್ಟಿದ್ದಾರೆ. ಇನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 54 ಸಾವಿರ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.