ಚೆನ್ನೈ: ತಮಿಳುನಾಡಿನ ಪ್ರಬಲ ರಾಜಕೀಯ ಪಕ್ಷ ಡಿಎಂಕೆ ಅಧ್ಯಕ್ಷ ಕರುಣಾನಿಧಿ ಮರೆಯಾದ ಬಳಿಕ ಉತ್ತರಾಧಿಕಾರಕ್ಕಾಗಿ ಸಂಘರ್ಷ ಆರಂಭವಾಗಿದೆ. ತಮ್ಮ ಸಹೋದರ ಸ್ಚಾಲಿನ್ ವಿರುದ್ದ ಅಳಗಿರಿ ಬಹಿರಂಗ ಸಮರ ಆರಂಭಿಸಿದ್ದಾರೆ, ತಮಗೆ ಡಿಎಂಕೆಯ ಎಲ್ಲರ ಬೆಂಬಲವಿದೆ ಎಂದು ಘೋಷಿಸಿರುವ ಅವರು ಪಕ್ಷದ ನೈಜ ಸದಸ್ಯರು ತಮ್ಮ ಬೆಂಬಲಕ್ಕಿದ್ದಾರೆ ಎಂದು ಹೇಳಿದ್ದಾರೆ.
ಚೆನ್ನೈನ ಮರಿನಾ ಬೀಚ್ನಲ್ಲಿರುವ ಕರುಣಾನಿಧಿ ಅವರ ಸಮಾಧಿಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪಕ್ಷದ ನೈಜ ಸದಸ್ಯರು ಹಾಗೂ ತಮಿಳುನಾಡಿನಲ್ಲಿರುವ ನಮ್ಮ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ನನ್ನ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಕಾಲವೇ ಎಲ್ಲದ್ದಕ್ಕೂ ಉತ್ತರ ನೀಡಲಿದೆ. ಈ ಹಿಂದೆ ನಡೆದ ಕಹಿ ಘಟನೆಗಳ ಬಗ್ಗೆ ನನಗೆ ಬೇಸರವಿದೆ. ಅಷ್ಟನ್ನು ಮಾತ್ರ ನಾನು ಹೇಳಬಯಸುತ್ತೇನೆ,” ಎಂದು ಅವರು ಹೇಳಿದ್ದಾರೆ.
ಅಳಗಿರಿ ಅವರು ಒಂದು ಕಾಲಕ್ಕೆ ಪಕ್ಷದಲ್ಲಿ ಪ್ರಬಲ ನಾಯಕರಾಗಿದ್ದವರು. ಪಕ್ಷದ ಉಸ್ತುವಾರಿ, ಕಾರ್ಯಕರ್ತರನ್ನು ನಿಯಂತ್ರಿಸುತ್ತಿದ್ದ ಅವರು, ಮುದುರೈ ಪ್ರಾಂತ್ಯದಲ್ಲಿ ಪಕ್ಷವನ್ನು ಡಿಎಂಕೆಯನ್ನು ಶಾಲಿಯಾಗಿ ಸಂಘಟಿಸಿದ್ದರು. 2009ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಅವರು, ಚುನಾವಣೆಯಲ್ಲಿ ಗೆದ್ದು ಯುಪಿಎ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ನಂತರ ಪಕ್ಷದಲ್ಲಿ ನಿರ್ಲಕ್ಷಿಸಲ್ಪಟ್ಟ ಅವರು ಹಂತ ಹಂತವಾಗಿ ತಂದೆ ಹಾಗೂ ಡಿಎಂಕೆಯಿಂದ ದೂರವಾಗಿದ್ದರು.
ಕರುಣಾನಿಧಿಯವರ ಮಕ್ಕಳಲ್ಲಿ ಎಂ.ಕೆ. ಸ್ಟಾಲಿನ್ ಪ್ರೀತಿಪಾತ್ರರಾಗಿದ್ದವರು ಮತ್ತು ಕರುಣಾನಿಧಿಯವರ ವಾರಸುದಾರ ಎಂದೇ ಕರೆಸಿಕೊಂಡಿದ್ದರು. ಆದರೆ ಮತ್ತೊಬ್ಬ ಮಗ ಅಳಗಿರಿ ಈಗ ಪ್ರತಿರೋಧ ಒಡ್ಡಿದ್ದು, ಸ್ಟಾಲಿನ್ ಡಿಎಂಕೆಯ ಮುಂದಿನ ಅಧಿಪತಿಯಲ್ಲ ಎಂದಿದ್ದಾರೆ.
ಕರುಣಾನಿಧಿ ಅವರು ಜೀವಂತವಿರುವಷ್ಟು ದಿನ ತಣ್ಣಗಿದ್ದ ನಾಯಕತ್ವದ ವಿಚಾರ ಈಗ ಅವರ ನಿಧಾನಾನಂತರ ದುತ್ತೆಂದು ಮೇಲೆದ್ದಿದೆ. ಈ ಹಿನ್ನೆಲೆಯಲ್ಲಿ ನಾಲೆ ನಡೆಯಲಿರುವ ಪಕ್ಷ ಕಾರ್ಯಕಾರಿ ಸಮಿತಿ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಭಾರಿ ಕುತೂಹಲ ಮೂಡಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos