ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತಿ ಭಾರತೀಯನ ಹೃದಯ ಮತ್ತು ಮನಸಿನಲ್ಲಿ ಅಜರಾಮರವಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಭಾರತ ರತ್ನ, ಅಜಾತ ಶತ್ರುವಿಗೆ ಭಾವಪೂರ್ಣ ವಿದಾಯ ಹೇಳಿದ ಬಳಿಕ ಟ್ವೀಟ್ ಮಾಡಿದ ಪ್ರಧಾನಿ, ಅಟಲ್ ಜೀ ನೀವು ನೀವು ಪ್ರತಿ ಭಾರತೀಯನ ಹೃದಯ ಮತ್ತು ಮನಸಿನಲ್ಲಿ ಜೀವಂತವಾಗಿದ್ದೀರಿ. ನಮ್ಮ ದೇಶ ನಿರ್ಮಾಣಕ್ಕೆ ನೀವು ನೀಡಿದ ಅಮೋಘ ಕೊಡುಗೆ ವರ್ಣಿಸಲು ಪದಗಳೇ ಇಲ್ಲ ಎಂದಿದ್ದಾರೆ.
ದೇಶಕ್ಕೆ ಅಸಾಧಾರಣ ಕೊಡುಗೆ ನೀಡಿದ, ಅಸಾಧಾರಣ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸಲು ದೇಶದ ಎಲ್ಲಾ ಭಾಗಗಳಿಂದ, ಎಲ್ಲಾ ಸಮಾಜದ ಜನ ಬಂದಿದ್ದರು. ಭಾರತ ನಿಮ್ಮನ್ನು ಗೌರವಿಸುತ್ತದೆ ಅಟಲ್ ಜೀ ಎಂದು ಮೋದಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ನಿನ್ನೆ ನಿಧನರಾದ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆ ಇಂದು ರಾಜ್ ಘಾಟ್ ನ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿ, ಅಮಿತ್ ಶಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಿದರು.