ದೇಶ

ಅಟಲ್ ಅಂತಿಮ ಯಾತ್ರೆ: ಬಿಜೆಪಿ ಕಚೇರಿ ತಲುಪಿದ ಪಾರ್ಥೀವ ಶರೀರ, ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನ

Manjula VN
ನವದೆಹಲಿ: ಅಜಾತಶತ್ರು ಎಂದೇ ವಿಖ್ಯಾತರಾಗಿದ್ದ ದೇಶ ಕಂಡ ಅಪ್ರತಿಮ ರಾಜಕಾರಣಿ, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಅವರ ನಿಧನದಿಂದಾಗಿ ಇಡೀ ದೇಶ ಶೋಕದ ಮಡುವಿನಲ್ಲಿ ಮುಳುಗಿದ್ದು, ವಾಜಪೇಯಿಯವರ ಅಂತಿಮ ದರ್ಶನಕ್ಕಾಗಿ ಎಲ್ಲೆಡೆಯಿಂದ ಜನರು ಪ್ರವಾಹದೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. 
ವಾಜಪೇಯಿಯವರ ಪಾರ್ಥೀವ ಶರೀರವನ್ನು ಕೃಷ್ಣ ಮೆನನ್ ಮಾರ್ಗ್ ದಲ್ಲಿರುವ ಅವರ ನಿವಾಸದಿಂದ ಬಿಜೆಪಿ ಕೇಂದ್ರ ಕಚೇರಿಗೆ ಮೆರಣವಣಿಗೆ ಮೂಲಕ ಕೊಂಡೊಯ್ಯಲಾಯಿತು. 
ದೆಹಲಿಯ ದೀನ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಗೆ ಇದೀಗ ವಾಜಪೇಯಿಯವರ ಪಾರ್ಥಿವ ಶರೀರವನ್ನು ಕರೆತರಲಾಗಿದ್ದು, ಬಿಜೆಪಿ ಕಚೇರಿಯಲ್ಲಿ ಮಧ್ಯಾಹ್ನ 1.30ರವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 
ಬಿಜೆಪಿ ಪ್ರಧಾನ ಕಚೇರಿಗೆ ವಾಜಪೇಯಿಯವರ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಂತಿಮ ನಮನ ಸಲ್ಲಿಸಿದರು. 
ಇದರಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಸುರೇಶ್ ಪ್ರಭು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ರಾಮ್ ನಾಯಕ್,  ಡಿಎಂಕೆ ನಾಯಕ ಎ. ರಾಜಾ. ಅಸ್ಸಾಂ ರಾಜ್ಯ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸೇರಿದಂತೆ ಹಲವಾರು ಗಣ್ಯಾತಿ ಗಣ್ಯರು ಅಂತಿಮ ನಮನ ಸಲ್ಲಿಸಿದರು. 
SCROLL FOR NEXT