ಕೊಚ್ಚಿ: ಶಬರಿಮಲೆ ತಂತ್ರಿಗಳಿಗಿಂತ ಕತ್ತೆಗಳೇ ಮೇಲು ಎಂದು ಹೇಳುವ ಮೂಲಕ ಕೇರಳದ ಲೋಕೋಪಯೋಗಿ ಸಚಿವ ಜಿ ಸುಧಾಕರನ್ ವಿವಾದಕ್ಕೀಡಾಗಿದ್ದಾರೆ.
ಭಾನುವಾರ ಅಖಿಲ ಕೇರಳ ಚೆರಮಾರ್ ಹಿಂದೂ ಮಹಾಸಭಾ ಸಂಘಟಿಸಿದ್ದ 'ವಿಲ್ಲು ವಂಡಿ ಯಾತ್ರಾ 125 ನೇ ವಾರ್ಷಿಕೋತ್ಸವ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಶಬರಿಮಲೆ ವಿವಾದ ಸಂಬಂಧ ಮಾತನಾಡಿದರು. 'ಶಬರಿಮಲೆ ತಂತ್ರಿಗಳು ದೇವಸ್ಥಾನದ ಆವರಣದಲ್ಲಿ ಓಡಾಡುವ ಕತ್ತೆಗಳಷ್ಟೂ ಘನತೆಯನ್ನು ಹೊಂದಿಲ್ಲ. ಮಂದಿರದಲ್ಲಿ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದೆಂಬ ಕೋರ್ಟ್ ತೀರ್ಪನ್ನು ವಿರೋಧಿಸಿರುವ ದೇವಸ್ಥಾನದ ತಂತ್ರಿಗಳು ಇದು ಪರಂಪರೆಗೆ ವಿರುದ್ಧವಾಗಿದ್ದು.. 10ರಿಂದ 50 ವಯೋಮಾನದ ಮಹಿಳೆಯರು ದೇವಸ್ಥಾನ ಪ್ರವೇಶಿಸಿದರೆ ಬಾಗಿಲು ಮುಚ್ಚುತ್ತೇವೆ ಎಂದಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಶಬರಿಮಲೆಯ ತಂತ್ರಿ ಪರಿವಾರದ ಮೇಲೆ ಸುಧಾಕರನ್ ನಿರಂತರವಾಗಿ ವಾಗ್ದಾಳಿ ನಡೆಸುತ್ತ ಬಂದಿದ್ದು, 'ತಂತ್ರಿಗಳಿಂದಾಗಿ ಅಯ್ಯಪ್ಪನ ಅಸ್ತಿತ್ವದ ಬಗ್ಗೆಯೇ ನಮಗೀಗ ಅನುಮಾನ ಶುರುವಾಗಿದೆ. ಅವರಿಗೆ ಅಯ್ಯಪ್ಪನ ಜತೆ ಯಾವುದೇ ನಂಟಾಗಲಿ, ನಿಷ್ಠೆಯಾಗಲಿ ಇಲ್ಲ. ಶಬರಿಮಲೆಯಲ್ಲಿ ಪರಿಶ್ರಮದ ಕೆಲಸ ಮಾಡುತ್ತಿರುವ ಶ್ರೇಯಸ್ಸು ಕತ್ತೆಗಳಿಗೆ ಸಲ್ಲಬೇಕು. ಪಂಪಾನದಿಯ ಬಳಿ ಇರುವ ಬೇಸ್ ಕ್ಯಾಂಪ್ ನಿಂದ ಬೆನ್ನ ಮೇಲೆ ವಸ್ತುಗಳನ್ನು ಹೇರಿಕೊಂಡು ಬೆಟ್ಟ ಹತ್ತುವ ಕತ್ತೆಗಳು, ಕಠಿಣ ಕೆಲಸದ ಬಳಿಕ ಸುಮ್ಮನೆ ಹೋಗಿ ಪಂಪಾ ನದಿಯ ಸಮೀಪ ವಿಶ್ರಮಿಸುತ್ತವೆ. ಆದರೆ ಅವು ಎಂದಿಗೂ ಆ ಪವಿತ್ರ ಸ್ಥಳವನ್ನು ಪ್ರತಿಭಟನೆಯ ಜಾಗವನ್ನಾಗಿಸಿಲ್ಲ. ಇವುಗಳಿಗೆ ತಂತ್ರಿಗಳಿಗಿಂತ ಹೆಚ್ಚಿನ ಘನತೆ ಇದೆ ಎಂದು ಹೇಳಿದ್ದಾರೆ.