ದೇಶ

ವಾಯುಮಾಲಿನ್ಯ ನಿಯಂತ್ರಣದಲ್ಲಿ ವಿಫಲ: ದೆಹಲಿ ಸರ್ಕಾರಕ್ಕೆ ಎನ್ ಜಿಟಿ ಯಿಂದ 25 ಕೋಟಿ ರೂ. ದಂಡ

Srinivasamurthy VN
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್(ಎಎಪಿ) ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ( ಎನ್ ಜಿಟಿ ) 25 ಕೋಟಿ ರುಪಾಯಿಯನ್ನು ದಂಡವಾಗಿ ವಿಧಿಸಿದೆ.
ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲಿನ್ಯ ನಿಯಂತ್ರಣದಲ್ಲಿ ದೆಹಲಿ ಸರ್ಕಾರ ವಿಫಲವಾಗಿದ್ದು, ವಾಯು ಮಾಲಿನ್ಯದ ಗುಣಮಟ್ಟವನ್ನು ಪರಿಶೀಲಿಸುವಲ್ಲಿಯೂ ಅಸಮರ್ಥವಾಗಿದೆ ಎಂದು ಹಸಿರು ನ್ಯಾಯಾಧಿಕರಣ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಸರ್ಕಾರಕ್ಕೆ ಬರೋಬ್ಬರಿ 25 ಕೋಟಿ ರೂಪಾಯಿಯ ದಂಡ ಹಾಕಿದೆ.
ದಂಡದ ಹಣವನ್ನು ಸರ್ಕಾರ ಖಜಾನೆಯಿಂದ ನೀಡುವಂತಿಲ್ಲ. ಬದಲಾಗಿ ಸರ್ಕಾರಿ ಅಧಿಕಾರಿಗಳ ಸಂಬಳ ಹಾಗೂ ಮಾಲಿನ್ಯ ಮಾಡಿದ್ದವರಿಂದ ವಸೂಲಿ ಮಾಡಿ ನೀಡುವಂತೆ ಸೂಚನೆ ನೀಡಿದೆ. ಒಂದು ವೇಳೆ ದೆಹಲಿ ಸರ್ಕಾರ 25 ಕೋಟಿ ರೂಪಾಯಿಯನ್ನು ನೀಡಲು ವಿಫಲವಾದರೆ, ಪ್ರತಿ ತಿಂಗಳು 10 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕೆಂದು ಎನ್ ಜಿಟಿ ಹೇಳಿದೆ.
ದೆಹಲಿಯ ಗುರುಗ್ರಾಮ, ನೋಯ್ಡಾ, ಫರಿದಾಬಾದ್, ಘಾಜಿಯಾಬಾದ್ ಸೇರಿದಂತೆ ಇನ್ನೂ ಹಲವು ಪ್ರದೇಶಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಅಲ್ಲದೇ ಜನರು ವಿಷಯುಕ್ತ ಗಾಳಿ ಸೇವನೆಯಿಂದಾಗಿ ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಸಂಬಂಧ ದೆಹಲಿ ಸರ್ಕಾರದ ವಿರುದ್ಧ  ಎನ್ ಜಿಟಿ ಯಲ್ಲಿ 6ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಸೋಮವಾರ ಇದರ ವಿಚಾರಣೆ ನಡೆಸಿದ  ಎನ್ ಜಿಟಿ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಎಎಪಿ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ತಿಳಿದುಬಂದಿದೆ.
SCROLL FOR NEXT