ದೇಶ

ಹನುಮಾನ್ ಮನುವಾದಿಗಳ ಗುಲಾಮ: ಬಿಜೆಪಿ ಸಂಸದೆ ಸಾವಿತ್ರಿ ಪುಲೆ

Nagaraja AB

ಲಖನೌ:  ಹನುಮಾನ್ ದಲಿತನಾಗಿದ್ದ ಮತ್ತು ಅವನು ಮನುವಾದಿ ಜನರ ಗುಲಾಮನಾಗಿದ್ದ ಎಂದು ಬಹರಾಯಿಚ್ ನ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಪುಲೆ ಹೇಳಿದ್ದಾರೆ

ಹನುಮಾನ್ ದಲಿತನಾಗಿದ್ದ ಎಂದು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾತಿಗೆ ಬೆಂಬಲ ವ್ಯಕ್ತಪಡಿಸಿರುವ ಸಾವಿತ್ರಿ ಬಾಯಿ ಪುಲೆ , ದಲಿತರು ಹಾಗೂ ಹಿಂದುಳಿದ ವರ್ಗದವರನ್ನು ಕೋತಿಗಳು ಮತ್ತು ರಾಕ್ಷಸರು ಎಂದು ಕರೆಯಲಾಗುತಿತ್ತು ಎಂದು ಅವರು ಹೇಳಿದ್ದಾರೆ.

ಶ್ರೀರಾಮನಿಗಾಗಿ ಹನುಮಾನ್ ಎಲ್ಲ ಸೇವೆಯನ್ನೂ ಮಾಡಿದ. ಆದರೂ ಅವನನ್ನು ಏಕೆ ವಾನರನನ್ನಾಗಿ ಮಾಡಲಾಯಿತು. ಅವನಿಗೇಕೆ ಬಾಲ ಇತ್ತು ಮತ್ತು ಅವನ ಮುಖವೇಕೆ ಕಪ್ಪಾಗಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ರಾಮನಿಗೆ ಅಷ್ಟು ಭಕ್ತಿಯಿಂದ ಸೇವೆ ಸಲ್ಲಿಸಿದ್ದಕ್ಕೆ ಹನುಮಾನ್ ನನ್ನು ವಾನರನ ಬದಲು ನರನನ್ನಾಗಿ ಮಾಡಬೇಕಿತ್ತು. ಹನುಮಾನ್ ದಲಿತನಾಗಿದ್ದ ಕಾರಣ ಆಗಲೂ ಅವಮಾನ ಎದುರಿಸಿದ್ದಂತೆ ಕಾಣುತ್ತದೆ. ದಲಿತರನ್ನೂ ಮನುಷ್ಯರಂತೆ ನಾವೇಕೆ ಪರಿಗಣಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಅಲ್ವಾರ್ ಜಿಲ್ಲೆಯ ಮಾಳಖೇಡಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್. ಹನುಮಾನ್ ದಲಿತನಾಗಿದ್ದು, ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಟಿಮಕ್ಕೆ ಎಲ್ಲಾ ಭಾರತೀಯ ಸಮುದಾಯವನ್ನು ಒಟ್ಟುಗೂಡಿಸಲು ಭಜರಂಗಿ ಬಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಹೇಳಿಕೆ ನೀಡಿದ್ದರು.

ಯೋಗಿ ಆದಿತ್ಯನಾಥ್ ಹೇಳಿಕೆ ನಂತರ ಭೀಮಾ ಸೇನೆ ಮುಖ್ಯಸ್ಥ ಚಂದ್ರಶೇಖರ್ , ಎಲ್ಲಾ ಹನುಮಾನ್ ದೇವಾಲಯಗಳನ್ನು ತಮಗೆ ನೀಡುವಂತೆ ಕೇಳಿದ್ದರು. ದೇಶದಲ್ಲಿನ ಎಲ್ಲಾ ಹಿಂದೂ ದೇವಾಲಯಗಳನ್ನು ದಲಿತರಿಗೆ ನೀಡಿ, ಅಲ್ಲಿ ದಲಿತ ಆರ್ಚಕರನ್ನು ನೇಮಿಸುವಂತೆ ಚಂದ್ರಶೇಖರ್ ಹೇಳಿದ್ದರು.

ದೇಶದಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರ ನಿರುದ್ಯೋಗ ಮತ್ತಿತರ ಸಮಸ್ಯೆಗಳಿಗೆ ಕೊನೆಯಿಲ್ಲದಂತಾಗಿದ್ದು, ದೇಶಕ್ಕೆ ದೇವಾಲಯಗಳ ಅಗತ್ಯವಿಲ್ಲ, ಕೇವಲ ಶೇ. 3 ರಷ್ಟಿರುವ ಬ್ರಾಹ್ಮಣರು ದೇವಾಲಯಗಳಿಂದ ಅನುಕೂಲ ಪಡೆಯುತ್ತಿದ್ದು, ದಲಿತರನ್ನು ಗುಲಾಮರಂತೆ ಮಾಡಿದ್ದಾರೆ ಎಂದು ಆರೋಪಿಸಿರುವ ಪುಲೆ  ನಮ್ಮ ಹಕ್ಕು ನಮ್ಮಗೆ ಕೊಡಿ ಇಲ್ಲದಿದ್ದರೆ ಸರ್ಕಾರ ಬಿಡಿ ಎಂದು ಆಗ್ರಹಿಸಿದ್ದಾರೆ.

SCROLL FOR NEXT