ಮೈಸೂರು: ಮೈಸೂರಿನಲ್ಲಿ ತಯಾರಾಗುವ ಅಳಿಸಲಾಗದ ಶಾಯಿ ಉತ್ತಮ ಗುಣಮಟ್ಟದ್ದಾಗಿದ್ದು, ಇದೇ ಶಾಯಿಯನ್ನು ಚುನಾವಣೆಯಲ್ಲಿ ಬಳಸಲಾಗುತ್ತದೆ ಎಂದು ಮಧ್ಯ ಪ್ರದೇಶ ಚುನಾವಣಾ ಆಯುಕ್ತ ಪರಶುರಾಮ್ ಹೇಳಿದ್ದಾರೆ.
ಮಂಗಳವಾರ ಮೈಸೂರಿನಲ್ಲಿ ನಡೆದ 19 ರಾಜ್ಯಗಳ ಚುನಾವಣಾ ಆಯುಕ್ತರ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ನಂತರ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಮಧ್ಯ ಪ್ರದೇಶ ಚುನಾವಣಾ ಆಯುಕ್ತ ಪರಶುರಾಮ್ ಅವರು, 'ಚುನಾವಣೆಗಳಲ್ಲಿ ಮತದಾರರ ಬೆರಳಿಗೆ ಹಾಕುವ ಅಳಿಸಲಾಗದ ಶಾಯಿಯನ್ನು ಮೈಸೂರಿನ ಪೇಂಟ್ಸ್ ಮತ್ತು ವಾರ್ನಿಶ್ ಸಂಸ್ಥೆ ಪೂರೈಸುತ್ತಿದೆ. ಸಂಸ್ಥೆಯು ಪೂರೈಸುತ್ತಿರುವ ಅಳಿಸಲಾಗದ ಶಾಯಿ ಬಗ್ಗೆ ನಮಗೆ ಸಂಪೂರ್ಣ ತೃಪ್ತಿ ಇದ್ದು ಇದನ್ನು ಬದಲಿಸುವ ಅಗತ್ಯ ನಮಗಿಲ್ಲ ಎಂದು ಹೇಳಿದರು.
ಅಂತೆಯೇ ಇಡೀ ದೇಶದ ಚುನಾವಣೆಗಳಲ್ಲಿ ಮೈಸೂರಿನಿಂದಲೇ ಅಳಿಸಲಾಗದ ಶಾಯಿ ಪೂರೈಕೆಯಾಗುತ್ತಿರುವುದು ಮೈಸೂರಿಗೂ ಹೆಮ್ಮೆ. ರಾಜ್ಯ ಸರಕಾರದ ಒಡೆತನದಲ್ಲಿರುವ ಈ ಸಂಸ್ಥೆಯಿಂದ ಪೂರೈಕೆಯಾಗುತ್ತಿರುವ ಶಾಯಿ ಬಗ್ಗೆ ನಮಗೆ ಸಂಪೂರ್ಣ ತೃಪ್ತಿ ಇದೆ. ಮಧ್ಯಪ್ರದೇಶ ಚುನಾವಣಾ ಆಯೋಗ ಮೈಸೂರಿನ ಅಳಿಸಲಾಗದ ಶಾಯಿಯನ್ನೇ ಪಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಇಂದು ನಡೆದ ಚುನಾವಣಾ ಆಯುಕ್ತರ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ 19 ರಾಜ್ಯಗಳ ಚುನಾವಣಾ ಆಯುಕ್ತರು ಪಾಲ್ಗೊಂಡಿದ್ದರು. ಈ ವೇಳೆ ಚುನಾವಣೆಯಲ್ಲಿ ತಾಂತ್ರಿಕತೆ ಮತ್ತು ಆನ್ ಲೈನ್ ಮತದಾನ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.