ಹೈದರಾಬಾದ್: ತೆಲಂಗಾಣದ ನೂತನ ಸಿಎಂ ಆಗಿ ಟಿಆರ್ ಎಸ್ ಅಧಿನಾಯಕ ಕೆ ಚಂದ್ರಶೇಖರ ರಾವ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹೈದರಾಬಾದ್ ನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ ಚಂದ್ರಶೇಖರ ರಾವ್ ಅವರು ದೈವ ಸಾಕ್ಷಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚಂದ್ರಶೇಖರ ರಾವ್ ಅವರಿಗೆ ರಾಜ್ಯಪಾಲ ನರಸಿಂಹನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಇನ್ನು ಚಂದ್ರಶೇಖರ ರಾವ್ ಅವರೊಂದಿಗೆ ಟಿಆರ್ ಎಸ್ ಹಿರಿಯ ಶಾಸಕ ಮಹಮದ್ ಅಲಿ ಅವರೂ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಪೂರ್ಣ ಪ್ರಮಾಣದ ಮಂತ್ರಿಮಂಡಲವನ್ನು ಇದೇ ಡಿಸೆಂಬರ್ 18ರಂದು ರಚಿಸುವುದಾಗಿಯೂ ಅಂದೇ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಟಿಆರ್ ಎಸ್ ಮೂಲಗಳು ತಿಳಿಸಿವೆ.
ಇನ್ನು ಕಳೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಟಿಆರ್ ಎಸ್ ಪಕ್ಷ 88 ಸ್ಥಾನಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ಅಲ್ಲದೆ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದಿದ್ದ ಶಾಸಕರೂ ಕೂಡ ಸಿಎಂ ಕೆಸಿಆರ್ ನೇತೃತ್ವದ ಟಿಆರ್ ಎಸ್ ಸರ್ಕಾರಕ್ಕೆ ತಮ್ಮ ಬೆಂಬಲ ಘೋಷಿಸಿರುವುದು ವಿಶೇಷ.